ಮಂಗಳವಾರ, ಡಿಸೆಂಬರ್ 27, 2016

Video : Mehebani - Beauty of Nature (ಮೆಹೆರ್ಬಾನಿ - ನಿಸರ್ಗದ ಸೌಂದರ್ಯತೆ)


ಸುಂದರ ನಿಸರ್ಗದ ನಡುವಿನ ನನ್ನ ಪ್ರಯಣದ ಕುರಿತು ಇದೊಂದು ಲಘು ಚಲನಚಿತ್ರ.
ಹಾಡು : ಮೆಹೆರ್ಬಾನಿ (ಸಿನಿಮಾ : ದ ಶಾಕೀನ್ಸ್)

This is a short video about my journey between beautiful nature.

Song : Meherbani (Movie : The Shaukeens)

ಗುರುವಾರ, ಡಿಸೆಂಬರ್ 22, 2016

“ನೋಡಬನ್ನಿ ನಮ್ಮೂರ” - ಕವನ 7




ಮುಂಜಾನೆಯ ಹಕ್ಕಿಗಳ ಚಿಲಿಪಿಲಿ ಕಲರವ
ಇದ ನೋಡಬಯಸಿದ ಆ ಬಾನ ಸೂರ್ಯ…
ಎಲ್ಲೆಲ್ಲೂ ತುಂಬಿರುವುದು ಉದುರುವ ಮಂಜಿನಸರ
ಇದರ ಸೆರೆಯಲಿ ಬಾರದೆ ರವಿಕಿರಣವು ಮಾಯ…

ಕೋಳಿಯ ಕೂಗಿಗೆ ಶುರುವಾಗುವುದು ನನ್ನ ಪ್ರತಿದಿನ
ಎನಮೇಲೆ ಮಲಗಿರುವುದು ಬೆಕ್ಕು, ಮುದುರಿಕೊಂಡು ಬಾಲವನ್ನ…
ಬಾಗಿಲ ತೆಗೆದರೆ ಕಂಡಿತು ಮಂಜಲಿ ಕೂಡಿದ ಸ್ವರ್ಗಬನ
ಆಹಾ! ಎಂತಹ ಜನುಮ ನನ್ನದು, ಮರೆತೆನು ಆಕ್ಷಣ…

ಕರುವು ಆಡುವುದು ಕೊಟ್ಟಿಗೆಯಲಿ ಹಸುವ ಸುತ್ತಿಬಂದು
ಇದನೋಡಿ ನಾಯಿಯು ಬಾಲವಾಡಿಸಿತು ಬೊಗಳಿಕೊಂಡು…
ತಣ್ಣನೆ ಗಾಳಿಚಲನೆಗೆ ಮರಗಿಡಗಳು ನಡುಗಿತು ಚಳಿಗೆಂದು
ದೋಸೆಯ ಮಾಡುತ್ತಿರುವಳು ನನ್ನಮ್ಮ, ಆಕಾಶವಾಣಿಯ ಕೇಳಿಕೊಂಡು…

ಸಿಗದಿನ್ನೊಂದು ಜನ್ಮ, ನೋಡಬನ್ನಿ ನಮ್ಮೂರ
ಮಲೆನಾಡ ಹಸಿರಸಿರಿಯಲಿ ಬೇಸರವೆಂಬುದು ತುಂಬಾದೂರ…
ಕಾಫಿ-ಚಹಾ ಮೆಣಸು, ಮರ ಗಿಡಗಳ ಸರದಾರ
ಕವಿಯ ಮಾಡಿತು ಎನ್ನ, ಇದ ನೆನೆದರೆ ಸಡಗರ…

ಬುಧವಾರ, ಡಿಸೆಂಬರ್ 21, 2016

"ಬ್ರೇಕ್ ಫಾಸ್ಟು" - (ಬತ್ತಿ - ೧)



ಬೆಳಗಿನ ಜಾವ ಗಂಟೆ ಎಂಟಾದಾಗ,
ಕೆಲಸಕೆ ಹೊರಡುವ ತವಕ,
ಆಚೆಗೆ ಈಚೆಗೆ ಹೋಗಿ, ಶರ್ಟು ಪ್ಯಾಂಟು ಧರಿಸಿ,
ಹೊರಟು ನಿಂತಾಗ, ಬಸ್ಸು ಬರಲು ಇದೆ ಕೇವಲ ಹತ್ತು ನಿಮಿಷ ಸಮಯ.

ಹೊಟ್ಟೆ ಚುರುಗುಟ್ಟುತಿದೆ,
ಬೆಳಗಿನ ಹಸಿವು ರೌದ್ರಾವತಾರವನ್ನಾಡುತಿದೆ,
ಬೇಗ ಎದ್ದು ಚಪಾತಿಯೋ, ಅವಲಕ್ಕಿಯೋ ಮಾಡೋಣವೆಂದುಕೊಂಡಿದ್ದೆ,
ಲೇಟಾಗಿ ಎದ್ದಿದರಿಂದ ಏನು ಅಂದುಕೊಂಡಿದ್ದೆ ಎಂದು ಎಣಿಸುವ ಸಮಯವೂ ಇಲ್ಲದಾಗಿದೆ.

ಅದೇನು ಮಹಾ.. ಕಂಪನಿಯಲ್ಲಿ ತಿಂಡಿ ಸಿಗುತ್ತಲ್ಲ ಎಂದ ಒಬ್ಬ ಭೂಪ,
ಹೌದಪ್ಪ.. ಆದರೆ ನನ್ನ ಕಷ್ಟ ನಾನೆ ಬಲ್ಲೆ ಪಾಪ.
ಸಿಂಪಲ್ಲಾಗೆ ಹೇಳುವುದಾದರೆ ಕಂಪನಿಯಲ್ಲಿ ಸಿಗುವ ತಿಂಡಿ ನನ್ನ ಬಾಯಿಗೆ ಹಿಡಿಸಲ್ಲ,
ದೋಸೆ, ನೀರ್ ದೋಸೆ ತಿಂದು ತೇಗಿದ ಹೊಟ್ಟೆ ಸಮೋಸ, ಬಜಿಯ ಸಹಿಸಲ್ಲ.

ಗೌತಮ ಹೇಳಿದ್ದ ಆಸೆಯೇ ದುಃಖಕ್ಕೆ ಮೂಲ,
ನನಗಂತು ಸದ್ಯಕ್ಕೆ ನನ್ನ ಹಸಿವಿನ ಆಳವೇ ಅದನೆಲ್ಲವಮೀರಿದ ಮೂಲ.
ಖಾಲಿ ಹೊಟ್ಟೆಯಲಿ ಮಧ್ಯಾಹ್ನದವರೆಗೂ ಸಮಯ ಕಳೆಯಬೇಕಾದ ಸ್ಥಿತಿ,
ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವುದೇ ನನಗೆ ಉಳಿದಿರುವ ಗತಿ.

ದಿನ ಸಮಯ ಕಳೆದಿದ್ದರೂ ಬಸ್ಸು ಬಂದಿರಲಿಲ್ಲ ,
ಹಾಗಂತ ಹೇಳಿ ನಾವು ಸುಮ್ಮನೆ ನಿಂತುಕೊಳ್ಳುವವರಲ್ಲ ,
ಸುತ್ತ ಮುತ್ತ ಹಾರಾಡುವ ಹಕ್ಕಿಗಳ ಸೊಭಗನು ಸವಿಯುವ ಅವಕಾಶವನ್ನು ಕಳೆದುಕೊಳ್ಳುವವರಲ್ಲ,
ದಿನದಿಂದ ನನ್ನ ಬೆಳಗಿನ ಹೊಟ್ಟೆ ಹಸಿವಿನ ವಿಧಿಯು ಬದಲಾಗುವುದೆಂದು ನನಗೂ ತಿಳಿದಿರಲಿಲ್ಲ.


ಒಂದು ದಿನ ಬಂದಿದ್ದ ಒಬ್ಬ ಅಣ್ಣ
ಸುಮಾರಾಗಿತ್ತು ಅವನ ಬಣ್ಣ,
ಅವನ ಬಳಿ ಇತ್ತು  ಒಂದು ಮಹಾ ಪಾತ್ರೆ,
ಪಾತ್ರೆಯ ಬಾಯಿ ತೆರೆದಾಗ ಅಲ್ಲೇ ಆಗಿತ್ತು ನಮ್ಮ ಕಣ್ಮನಸಿಗೆ  ಒಂದು ಲಘು ಜಾತ್ರೆ.

ಪಾತ್ರೆಯಲ್ಲಿತ್ತು ಇಡ್ಲಿ ... ವಡಾ ...
ಅದನ್ನು ನೋಡಿದ್ದೆ ತಡ,
ಬಂದಿತ್ತು ನಮ್ಮ ಬಾಯಲ್ಲಿ ನೀರು ಒಂದು ಕೊಡ.

ಮೊದಲು ನನ್ನ ಗೆಳೆಯ ಮುನ್ನೆಜ್ಜೆಯಿಟ್ಟ ತಣಿಸಲು ಆತನ ಹೊಟ್ಟೆಯ ಬರ,
ತಿಂಡಿಯ ಬಗೆ ವಿಚಾರಿಸಿ ಕೇಳಿದಹೇಗಿದೆಯಣ್ಣ ಇದರ ದರ?
ಆತ "ಹತ್ತು (೧೦) ರುಪಾಯಿಗೆ ಮೂರು () ಇಡ್ಲಿ ಅಥವಾ ಎರಡು () ವಡ", ಎಂದ ಬಳಸಿ ಅವನ ಗಡುಸಾದ ಸ್ವರ,
ಇದನ್ನು ಕೇಳಿದ ನಮಗಂತು ಲಭಿಸಿತ್ತು  ಸ್ವರ್ಗ, ಬರೇ ಮೂರೇ ಮೂರು ಇಂಚು ದೂರ.

ಅಂದಿನಿಂದ ಖಾಯಂ ಆಗಿತ್ತು ನಮ್ಮ ಬೆಳಗ್ಗಿನ  ಬ್ರೇಕ್ ಫಾಸ್ಟು
ಇಡ್ಲಿ ಜೊತೆ ತೆಂಗಿನ ಚಟ್ನಿ.. ಆಹಾ .. ಟೆಸ್ಟೋ ಟೆಸ್ಟು.
ನಾವು ಬಯಸಿದ ತಿಂಡಿ ನಮ್ಮನ್ನು ಹುಡುಕಿ ಬಂದಿತ್ತು,
ಬೆಳಗಿನ ಖಾಲಿ ಹೊಟ್ಟೆಯ ಕೊರಗು ಈಗ ಮರೆಯಾಗಿತ್ತು.

ಇಷ್ಟು ದಿನ ಮನಸಿಲ್ಲದ ಮನಸಲಿ ಎದ್ದು ಲೇಟಾದರೆ ಬಸ್ಸು ತಪ್ಪುತ್ತಿತ್ತು
ಆದರೆ ಈಗ ಲೇಟಾದರೆ ಬಸ್ಸಿನ ಮೊದಲು ಇಡ್ಲಿ ತಿನ್ನುವ ಅವಕಾಶ ತಪ್ಪುತ್ತಿತ್ತು,
ಮೊದಲು ಕೆಲಸಕೆ ಹೋಗುವ ಅನಿವಾರ್ಯತೆ ನಮ್ಮನ್ನು ಎಳೆಯುತ್ತಿತ್ತು,
ಆದರೆ ಈಗ ಇಡ್ಲಿ ತಿನ್ನುವ ಹಂಬಲ ನಮ್ಮನ್ನು ಸಳೆಯುತಿತ್ತು.

 ಈಗಂತು ನಡುನಡುವೆ ಇಡ್ಲಿ ಅಣ್ಣ ಬರದೇ ಹೋದರೆ ಆಕಾಶವೇ ಕಳಚಿ ಬಂದಂತಾಗುತ್ತದೆ,
ನಮ್ಮಲ್ಲಿ ಕೆಲವರಿಗಂತು ಕಂಪನಿ ಕೆಲಸಗಿಂತ ಬೆಳಗಿನ ಇಡ್ಲಿಯೇ ಮುಖ್ಯವಾಗಿದೆ.
ಅಷ್ಟಕ್ಕೂ ನೀವೇ ಹೇಳಿ ಇಡೀ ದಿನ ಲವಲವಿಕೆಯಿಂದಿರಲು ಯಾವುದು ಬೇಕು ಫಸ್ಟು ?
ಅಲ್ವೇ ಅದು ರುಚಿಯಾದ ಆರೋಗ್ಯಕರ ಹೊಟ್ಟೆ ತುಂಬಿಸುವ ಬ್ರೇಕ್ ಫಾಸ್ಟು ?


-ಲ್ಯಾಂಡಲ್.


ಭಾನುವಾರ, ನವೆಂಬರ್ 20, 2016

"ನಾ ಬರುವ ಆ ಸಂಜೆ…" - ಕವನ 6



ನಾ ಬರುವ ಆ ಸಂಜೆ…
ಬಾನಲಿ ರವಿಯು ಕೆಂಪಾಗಿರುವುದ ನಾಕಂಡೆ.
ಆ ಸೊಗಸ ನೋಡಬಂತು ಹಕ್ಕಿಗಳ ಹಿಂಡೆ.
ರಸಿಕನಾದೆನು ನಾನಿನಗೆ ಆ ದಿನದಂದೆ….

ನಾ ಬರುವ ಆ ಸಂಜೆ…
ಮಕ್ಕಳೆಲ್ಲ ಆಡುತ್ತಿರುವರು ಎಲ್ಲವ ಮರೆತಂತೆ.
ಬದಿಯಲ್ಲಿರುವ ಶ್ವಾನವು ಕುಳಿತಿರುವುದು ಅವರ ನೋಡಿ ನಗುವಂತೆ.
ಖುಷಿಯೆಂಬುದು ಒಂದೇ ಈ ನಿನ್ನ ಸೃಷ್ಟಿಯ ಮುಂದೆ….

ನಾ ಬರುವ ಆ ಸಂಜೆ…
ಕರುವೊಂದು ಓಡಿಬಂತು ಹಸಿವಾದಂತೆ.
ಕೊರಳಗಂಟೆಯ ಸದ್ದಿಗೆ ಹಸುವು ಕರೆಯಿತದವ “ಅಂಬೇ”.
ಎಲ್ಲವೂ ನಿನ್ನ ಒಲವಯ್ಯ, ಮರಳಾದೆನು ನಿನಗೆಂದೆ….

ನಾ ಬರುವ ಆ ಸಂಜೆ….
ನಾನೆನೆಯುವೆ ಎಲ್ಲವ ಪಡೆದಂತೆ.
ಪಕೃತಿಯೇ ಈ ನಿನ್ನ ಮಾಯೆಯ ನೋಡಿ ನಾಸೋತೆ.
ನಿನ್ನ ನೋಡಿದ ಈ ಜನುಮ ಸಾರ್ಥಕವಾದಂತೆ…

ಶುಕ್ರವಾರ, ಅಕ್ಟೋಬರ್ 21, 2016

" ಕನಸಲಿ ಕಳೆದಿರುವೆ.." - ಕವನ 5




ನಿದಿರೆಯೇ ಬಾರದ ಈ ಕಣ್ಣಲಿ
ಕನಸೊಂದ ನಾ ಕಂಡಿರುವೆ…

ಕನಸ ಕಂಡ ಮರುಕ್ಷಣವೇ
ಅದರೊಳಗೆ ನಾ ಕಳೆದಿರುವೆ…

ಕನಸೇ ನೀ ಛಲವ ಬಿಡದೆ
ನಾ ಎಲ್ಲವ ತೊರೆದಿರುವೆ…

ಕನಸ ಲೋಕವ ನನಸ ಮಾಡಲು
ನಾ ನನ್ನೆ ಕಾಡಿರುವೆ…

ಬದುಕೆಂಬ ಈ ಪಯಣದ ಬೆರಗಿಗೆ
ನಾ ಎಲ್ಲವ ಮರೆತಿವೆ..

ಬುಧವಾರ, ಅಕ್ಟೋಬರ್ 12, 2016

“ಪ್ರಕೃತಿಯೇ ಮೂಲ, ಪ್ರಕೃತಿಯೇ ಅಂತ್ಯ” – ನಿಖರ ಮಾತು 1


ಈ ಆಧುನಿಕ ಯುಗದಲ್ಲಿ ಉತ್ತಮವಾದ ತಂತ್ರಜ್ನಾನಗಳನ್ನು ಬಳಸುತ್ತಾ ಎಲ್ಲಾ ಭೂಜೀವಿಗಳಿಗಿಂತಲೂ ಬುದ್ದಿಶಾಲಿ ಜೀವಿ “ಮಾನವ” ಎಂದುಕೊಳ್ಳುವಷ್ಟು ಮುಂದುವರೆದಿದ್ದೇವೆ. ಆದರೆ ಈ ಎಲ್ಲಾ ಜ್ಞಾನ, ಬುದ್ದಿಶಾಲಿತನದ ಮೂಲವು ಯಾವುದೆಂದು ಸ್ವಲ್ಪ ಯೋಚಿಸಬೇಕಾಗಿದೆ. ನಾವು ಇದನ್ನು ಮರೆತಿದ್ದೇವೆ. ನಮಗೆ ತಿಳಿಯದಂತೆ ಈ ಮೂಲವನ್ನು ನಾಶಮಾಡಿಕೊಂಡು ಬಂದಿದ್ದೇವೆ. ಅದೇ ಈ ಸುಂದರವಾದ “ಪ್ರಕೃತಿ”. ಎಲ್ಲಾ ವಿಷಯಗಳಿಗೂ, ತಂತ್ರಜ್ಞಾನಗಳಿಗೂ ಹಾಗು ನಾವು ಬದುಕಲು ರೂಡಿಸಿಕೊಂಡು ಬಂದಂತಹ ಪ್ರತಿ ಉದ್ಯೋಗವು ಕೂಡ ಇದೆ ನಿಸರ್ಗದ ಕಾಣಿಕೆಯಾಗಿದೆ. ಬನ್ನಿ ಒಮ್ಮೆ ಪ್ರಕೃತಿಯೊಳಗೆ ನಮ್ಮ ಚಿಂತನೆಯನ್ನು ಹರಿಸುವ.

ಮಾನವನು ಈ ಪ್ರಕೃತಿಯನ್ನು ನೋಡುತ್ತಾ ಬೆಳೆಯುತ್ತಾ ಬಂದಿರುವನು ಹಾಗೆ ಈತನ ಮೆದುಳು ಅದ್ಭುತ ಯೋಚನಾಶಕ್ತಿಯ ಆಗರವಾಗಿದ್ದು ಈ ಪರಿಸರವನ್ನು ಬಗೆಬಗೆಯಿಂದ ನೋಡುಲಾರಂಬಿಸಿದನು. ಈ ಪರಿಸರವನ್ನು ನೋಡಿ ಆನಂದಿಸಿದನು. ಅಲ್ಲದೆ ಈ ಆನಂದವನ್ನು ಅದ್ಭುತವಾಗಿ ವರ್ಣಿಸಲಾರಂಬಿಸಿದ, ಈತನು “ಕವಿ”ಯಾದ. ಈ ಸೌಂದರ್ಯವನ್ನ ಚಿತ್ರದ ಮೂಲಕ ಮೂಡಿಸಿ “ಕಲಾವಿದ”ನಾದನು. ಹೀಗೆ ಹೋಗುತ್ತಾ ಕ್ರಮೇಣ ಪ್ರಕೃತಿಯ ವಿಚಿತ್ರ ಸಂಗತಿಗಳನ್ನ ನೋಡಿ “ಇದು ಏಕೆ? ಅದು ಹೇಗೆ?” ಎನ್ನುತ್ತಾ ತನ್ನಲ್ಲಿ ಹಲವಾರು ಪ್ರಶ್ನೆಗಳನ್ನ ಕೇಳಲಾಂಬಿಸಿದನು. ಈತನ ಪ್ರಶ್ನೆಗಳು ಈತನನ್ನು ಸಂಶೋಧನೆಯಲ್ಲಿ ತೊಡಗುವಂತೆ ಮಾಡಿತು. ಈತ “ವಿಜ್ಞಾನಿ” ಎಂದು ಎನಿಸಿಕೊಂಡ. ಅದ್ಭುತವಾದ ಸಂಶೋಧನೆಯಿಂದ ಹಲವಾರು ರಹಸ್ಯಗಳನ್ನು ಭೇದಿಸಲು ಆರಂಭಿಸಿದ.

ಮುಂದುವರೆಯುತ್ತ ಮಾನವನು ಈ ನಿಸರ್ಗವನ್ನು ಬೆಳೆಸುವುದನ್ನು ಚೆನ್ನಾಗಿ ಕಲಿತ, ತನ್ನ ಹೊಟ್ಟೆಪಾಡಿಗಾಗಿ ಆಹಾರ ಪದಾರ್ಥಗಳನ್ನು, ಸಸ್ಯಗಳನ್ನು ಬೆಳೆಸುವುದಲ್ಲದೆ ಪ್ರಾಣಿಗಳ ಸಾಕಣೆಯಲಲ್ಲಿಯು ನಿಪುಣನಾಗಿ “ರೈತ” ಎಂದು ಹೇಳಲ್ಪಟ್ಟನು. ವಾಸಕ್ಕಾಗಿ ಮರದ ಸಲಕರಣೆಗಳ ಮಾಡಿ “ಕಮ್ಮಾರ”ನೂ, ದೇಹ ರಕ್ಷಣೆಯ ಸಲುವಾಗಿ ಚರ್ಮದ ತೊಡುಗೆಗಳನ್ನ ಮಾಡಿ “ಚಮ್ಮಾರ”ನಾಗಿಯೂ, ಕಲ್ಲಿನ ಮೂರ್ತಿಗಳ ಮಾಡಿ “ಶಿಲ್ಪಿ”ಯಾಗಿ ಬೆಳೆದು ನಿಂತನು. ಹೀಗೆ ಹಲವಾರು ಬದಲಾವಣೆಗಳನ್ನು ತಂದುಕೊಂಡ ಮಾನವ ತಂತ್ರಜ್ಞಾನವನ್ನು ಇಲ್ಲಿಯವರೆಗೆ ತರಲು ಯಶಸ್ವಿಯಾದ. ಸ್ನೇಹಿತರೇ, ಇದಕ್ಕೆಲ್ಲವೆ ಈ ಪ್ರಕೃತಿಯೇ ಕಾರಣವೆಂದು ಅನುಸುತಿಲ್ಲವೇ? ಈ ನಿಸರ್ಗದಿಂದಲೇ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಔಷಧೀಯ ಮೂಲವನ್ನು ತೋರಿಸಿಕೊಟ್ಟ “ಮಹರ್ಷಿ ಪತಂಜಲಿ”ಯವರು ಆಯುರ್ವೇದದ ಪಿತಾಮಹವೆಂದಿಸಿಕೊಂಡರು. ಪ್ರತೀ ಪುರಾಣಗಳಲ್ಲೂ ಈ ಪ್ರಕೃತಿ ಮಹತ್ವಪೂರ್ಣವಾದ ಪಾತ್ರವಹಿಸುತ್ತದೆ. ನೀವು ಕೂಡ ಯಾವುದೇ ವಿಷಯ ಅಥವಾ ಉದ್ಯೋಗವನ್ನೆ ನೆನೆದು ಅದರ ಮೂಲವ ಹುಡುಕಲು ಪ್ರಯತ್ನಿಸಿ, ಅದು ಈ ಪ್ರಕೃತಿದೇವಿಯ ಮಡಿಲಿಗೆ ಕೊನೆಯಲಿ ತಲುಪುದು.

ಈ ಪ್ರಕೃತಿಯಲ್ಲಿ ದೊರಕದ ವಿಷಯಗಳಿಲ್ಲ, ಎಲ್ಲಾ ಪ್ರಶ್ನೆಗೂ ಉತ್ತರ ಇಲ್ಲೇ ದೊರಕುವುದು.ಇಷ್ಟೆಲ್ಲ ಮಹತ್ವವೆಂದೆನಿಸಿಕೊಂಡರೂ ಈಗ ಈ ಪರಿಸರವು ಈ ಮಾನವನಿಂದಲೇ ನಾಶಗೊಳ್ಳುತ್ತಿದೆ, ಎಂತಹ ಒಂದು ದುರ್ದೈವ ! ತನ್ನ ಅಭಿವೃದ್ದಿ ಹಾಗು ಸಕಲ ಜ್ಞಾನವು ಈ ನಿಸರ್ಗದ ಕಾಣಿಕೆಯೆಂಬುದನ್ನು ಮರೆತು ತನ್ನ ಸ್ವಾರ್ಥಕ್ಕಾಗಿಯೂ ಮತ್ತು ತನ್ನ ಐಷರಾಮಿ ಜೀವನಕ್ಕಾಗಿ ನಿಸರ್ಗದ ನಾಶದ ಹಾದಿಯನ್ನು ಹಿಡಿದಿದ್ದಾನೆ. ಈ ಪರಿಸರವನ್ನು ನೋಡುತ್ತಿರುವ ಮಾನವ “ಇದು ನಮಗಾಗಿ ದೊರೆತ ಕಾಣಿಕೆ” ಎಂದೆನ್ನುವ ಬದಲು “ಯಾರದೋ ಸ್ವತ್ತು, ಲಾಭ ನನಗೆ” ಎಂದು ಅರಣ್ಯ ಸಂಪತ್ತನ್ನೇ ಲೂಟಿ ಮಾಡುತ್ತಾ ಬಂದಿದ್ದಾನೆ.

ಆದರೆ, ನಮ್ಮ ಆದಿ ಪ್ರಕೃತಿಯಾಗಿದ್ದರಿಂದ ಇದರ ಅಂತ್ಯವು ನಮ್ಮ ಅಂತ್ಯವಾಗಿಯೂ ಇರುವುದು. ಇದರ ಬಗ್ಗೆ ಬುದ್ದಿವಂತ ಮಾನವ ಗಂಭೀರವಾಗಿ ಯೋಚಿಸಬೇಕಾಗಿದೆ. ಈಗಾದರು ಎಚ್ಚೆದ್ದು ಪ್ರಕೃತಿಯ ಉಳಿವಿಗಾಗಿ ಮತ್ತು ಬೆಳೆಸುವ ಪ್ರಯತ್ನವನ್ನ ಮಾಡಬೇಕಾಗಿದೆ. ಪ್ರಕೃತಿಯ ರಕ್ಷಣೆಯೇ ನಮ್ಮ ಸ್ವರಕ್ಷಣೆಯಾಗಿದೆ. ಇದು ಈ ಮಾನವಕುಲದ ಅಭಿವೃದ್ದಿಯೊಂದಲ್ಲದೆ ರಾಷ್ಟ್ರದ ಸಮೃದ್ಧ ಬೆಳವಣಿಗೆಗೂ ದಾರಿಯಾಗುವುದು.

ಗುರುವಾರ, ಅಕ್ಟೋಬರ್ 6, 2016

“ಬಡವನಾಗಿಯೇ ಉಳಿಯುವೆ” - ಕವನ 4



ಜೀವನವನೊಮ್ಮೆ ಸಾಗಿಸು ಎಲ್ಲವ ಅನುಸರಿಸಿ
ಹೊಟ್ಟೆ ಪಾಡಿಗಾಗಿ ಕಣ ಬೆವರನ್ನ ಸುರಿಸಿ
ಕಷ್ಟವೆಂಬುದ ವರವೆಂದು ಅನುದಿನವು ಭಾವಿಸಿ
ಹಿಡಿಯೆನು ಅಡ್ಡದಾರಿಯ ಸಿರಿವಂತಿಕೆಯ ಬಯಸಿ
“ಬಡವನಾಗಿಯೇ ಉಳಿಯುವೆ” ನಿಮಗೆಲ್ಲ ತಲೆಬಾಗಿಸಿ…


ಮಳೆಗಾಲಕ್ಕೆ ಸೋರುವ ಈ ಮನೆಯು
ಮಾಡದು ದುರ್ಬಲ ಎನ್ನ ಮನವ..
ಚಳಿಗಾಲಕ್ಕೆ ಸಿಗದ ಆ ಬರೆಬಟ್ಟೆಯು
ಮರೆಸದು ಎನ್ನ ನಂಬಿಕೆಯೆಂಬ ಕಿರಣವ..
“ಬಡವನಾಗಿಯೇ ಉಳಿಯುವೆ” ಇದನ್ನೆಲ್ಲ ಸಹಿಸಿ…


ಹೊಸನಂಬಿಕೆಯೊಂದು ಬೇಕು ಬಡಪಾಯಿ ಜೀವನಕೆ
ಪ್ರತಿದಿನವೆಂಬ ಹೊಸಹರುಷವು ಸಾಕೆನ್ನ ಉಳಿವಿಗೆ..
ದೊರೆಯಾಗೆನು ನಾನು, ಈ ನೆಮ್ಮದಿಯ ಅಳಿಸಿ
ಸಾಯುವವರೆಗೆ ದುಡಿಯುವೆ ಈ ದೇಹವ ಸವೆಸಿ
“ಬಡವನಾಗಿಯೇ ಉಳಿಯುವೆ” ಎಲ್ಲವನ್ನ ತ್ಯಜಿಸಿ…

ಮಂಗಳವಾರ, ಅಕ್ಟೋಬರ್ 4, 2016

“ಮಳೆಗಾಲದ ಸಂಭ್ರಮ” - ಕವನ 3




ಗುಡುಗು-ಸಿಡಿಲುಗಳ ಸದ್ದ ಕೇಳಲು
ಆಯಿತು ಮನದಲ್ಲೊಂದ ಕಂಪನ…
ಆ ಮಿಂಚಿನ ರಭಸದ ಹೊಡೆತಕೆ
ಈ ಧರೆಯೇ ನಿನಗಾಗಿ ತಲ್ಲಣ…

ಸೂರ್ಯನು ಹೆದರಿ ಮರೆಯಾದನು
ಕಾರ್ಮೋಡವಲ್ಲವೇ ಇದಕ್ಕೆ ಕಾರಣ…
ಬೀಸೋ ಗಾಳಿಯು ಸುತ್ತಾಡಲು
ತಗರೆಲೆಗಳು ಸಿಲುಕಿ ಮರಣ…

ಮಳೆಹನಿಗಳು ಮುತ್ತಿಡಲು ಈ ನೆಲವನ
ಹಸಿಹಸಿರಾಗಿ ಕೂಡಿತು ತನುಮನವು…
ನಿನ್ನ ಬಣ್ಣಿಸಲಾಗದೆ ಈ ಕವನ
ಬರೆಯುತ ಮರೆತೆನು ಪ್ರತಿಕ್ಷಣವು…

ಗುರುವಾರ, ಸೆಪ್ಟೆಂಬರ್ 22, 2016

"ಓ ಬಾಲ್ಯವೇ.." : ಕವನ 2


ಮಣ್ಣಿನಲಿ ಮನೆಯ ಮಾಡಿ
ಮಳೆಯಲಿ ಕುಣಿದಿರುವೆ....
ಹಣವೆಂಬುವ ಮರವನೇರಿ
ನೆಲವನ್ನ ಮರೆತಿರುವೆ....

ಓ ಬಾಲ್ಯವೇ.. ನಾ ನಿನ್ನ ಕಳೆದಿರುವೆ..

ಮರದ ಚಕ್ರದ ಗಾಡಿಯ ಮಾಡಿ
ಜಗವನ್ನೇ ಪಯಣಿಸಿರುವೆ....
ಅಹಂಕಾರವೆಂಬ ಶಿಖರವೇರಿ
ನನ್ನದೆಂಬುವನು ಕೊಂದಿರುವೆ....

ಓ ಬಾಲ್ಯವೇ.. ನಾ ನಿನ್ನ ತೊರೆದಿರುವೆ..

ಹಾರುವ ಗಾಳಿಪಟವ ಹಿಡಿದು
ಗಗನವನ್ನೇ ಚುಂಬಿಸಿರುವೆ....
ಗುರಿಯ ತಲುಪುವ ದುರಾಸೆಯಿಂದ
ಸ್ವಾರ್ಥದ ಕಡಲಲಿ ಬೆರೆತಿರುವೆ....

 ಓ ಬಾಲ್ಯವೇ.. ನಾ ನಿನ್ನ ಮರೆತಿರುವೆ..

ಶನಿವಾರ, ಸೆಪ್ಟೆಂಬರ್ 17, 2016

ಅವನಲ್ಲಿ ನನ್ನೊಂದು "ಪ್ರಾರ್ಥನೆ" : ಕವನ 1


ಹೇಗೆ ಕಳೆಯಲಿ ಈ ಜೀವನವ..
ತಿಳಿಯದಂತಾಗಿದೇ ನನ್ನದೆಂಬುವ ಗುರಿಯ....
ನೆನೆಯುತ್ತಲೇ ಕಳೆಯುತ್ತಿರುವೆ ನಾ ಪ್ರತೀ ದಿನವ..
ಸಿಗಬಾರದೇ ಇದಕ್ಕೆಲ್ಲ ಒಂದು ತಿರುವ..

ಓ ದೇವರೇ.. ಬಾ ಬೇಗನೇ....

ಕರಗದೇ ಕೇಳಿ ನಿನ್ನ ಆ ಹೃದಯ..
ತಿಳಿಯುತ್ತಿಲ್ಲವೇ ನಿನಗೆ ನಮ್ಮೆಲ್ಲರ ನೋವ....
ಬೆಳಗು ಬೇಗನೆ ಬಂದು ಈನಮ್ಮ ಮನವ..
ನೀನಲ್ಲವೇ ಈ ಧರೆಗೆ ಒಡೆಯ....

ಓ ದೇವರೇ.. ಇದೇ ನನ್ನ ಪ್ರಾರ್ಥನೆ....