Article ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Article ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜುಲೈ 27, 2019

ಮಲೆನಾಡು "ಮಲೆಗಳಿಲ್ಲದ ನಾಡು" - ನಿಖರ ಮಾತು 4



ನಾನು ನನ್ನ ಬಾಲ್ಯದ ದಿನಗಳನೊಮ್ಮೆ ನೆನೆದುಕೊಂಡರೆ ನೆನಪಾಗುವುದು ನಮ್ಮನೆಯ ಸುತ್ತಮುತ್ತಲಿನ ಹಸಿರು ಹಸಿರಾದ ಗಿಡಮರಬಳ್ಳಿಗಳು, ಹಲವಾರು ಪ್ರಾಣಿ-ಪಕ್ಷಿಗಳ ಕೂಗು, ವಿಧವಿಧವಾದ ಹಾವುಗಳು ಮತ್ತು ಚಿಟ್ಟೆಗಳು. ಮನೆಯ ಒಳಗೆ ಕೂಡ ಹಲವಾರು ಬಾರಿ ಹಾವುಗಳು ನುಸುಳಿ ಬಂದದುಂಟು. ಹವಾಮಾನಗಳ ಸನ್ನಿವೇಶಗಳು ಮಲೆನಾಡಿನಲ್ಲಿ ಬೇರೆಯೇ ಅನುಭವಗಳನ್ನು ಸೃಷ್ಟಿಮಾಡುತ್ತಿದ್ದವು. ಮಲೆನಾಡಿನಲ್ಲಿ ಬೇಸಿಗೆ ಎಂಬುದು ಅಷ್ಟೊಂದು ವ್ಯತ್ಯಾಸ ತರುತ್ತಿರಲಿಲ್ಲ. ಮಧ್ಯಾಹ್ನದ ಸಮಯಕ್ಕೆ ಹೆಚ್ಚು ಬಿಸಿಲಿದ್ದರೂ ಸೆಕೆಯಾಗುವ ಸನ್ನಿವೇಶವೇ ಇರಲಿಲ್ಲ. ಸಂಜೆ ವೇಳೆಗೆ ತಂಪಾಗಿ, ಚಳಿಗಾಲದ ಹವಾಮಾನ ಬಂದುಬಿಡುತ್ತಿತ್ತು. ವಿದ್ಯುತ್ ಕಾಣದಿರುವ ನಾವು ಸೀಮೆಎಣ್ಣೆಯ ದೀಪದಿಂದಲೇ ನಮ್ಮ ಪ್ರತಿರಾತ್ರಿಯನ್ನು ಸಾಗುತಿದ್ದೆವು.

ಮಳೆಗಾಲವಂತು ಹೇಳುವುದೆ ಬೇಡ! ಮಳೆಯ ಆ ರಭಸವು ನಮ್ಮನ್ನು ಕುಳಿತ ಜಾಗದಿಂದ ಏಳದಂತೆ ಜಡವಿಡಿಸಿಬಿಡುತ್ತಿತ್ತು. ಒಂದುವೇಳೆ ಮನೆಯಿಂದ ಹೊರಗೆ ಹೋದರೆ, ಬರುವಾಗ ಕಾಲುಗಳನ್ನೊಮ್ಮೆ ಆಳವಾಗಿ ನೋಡಿಕೊಳ್ಳಬೇಕಾಗಿತ್ತು ಅಷ್ಟೊಂದು "ಜಿಗಣೆ"ಗಳ ಹಾವಳಿ. ಒಲೆಯ ಬದಿ ಚಳಿಕಾಯಿಸಲು ಕುಳಿತರೆ ಏಳುವ ಜಾಯಮಾನವೇ ಇಲ್ಲ. ಬೆಚ್ಚಗೆ ಕಾಫಿ ಕುಡಿದು ಹಲಸಿನ ಬೀಜವನ್ನು ಒಲೆಯಲ್ಲೆ ಸುಟ್ಟು ತಿನ್ನುವ ಮಜಾವೇ ಬೇರೆಯಾಗಿತ್ತು. ಇಂತಹ ಪ್ರಸಂಗಗಳು ಮಲೆನಾಡಿನಲ್ಲೇ ಅನುಭವಿಸಲು ಸಿಗುವುದು. ಮಳೆಗಾಲ ಮುಗಿದರೆ ಸಾಕು, ನಂತರ ಚಳಿಗಾಲದ ಹಾವಳಿ. ಎಷ್ಟು ಸ್ನಾನ ಮಾಡಿದರೂ, ನೀರಿನ ಅಂಡೆ ಕಾಲಿಯಾಗುವವರೆಗೆ ಸ್ನಾನ ಮಾಡಬೇಕೆನಿಸುತ್ತಿತ್ತು. ನಿಜವಾಗಿಯೂ ಹೇಳಬೇಕೆಂದರೆ, ಮಲೆನಾಡಿನಲ್ಲಿ ಮಳೆಗಾಲ ಮತ್ತು ಚಳಿಗಾಲಗಳೇ ಪೂರ್ತಿ ವರ್ಷ ನಡಿಯುತ್ತಿತ್ತು.

ಇವು ಈಗ ಬರಿ ನೆನಪುಗಳಾಗಿಯೇ ಉಳಿದಿರುವುದು ಮಾತ್ರ. ಈಗಿನ ಮುಂದುವರಿಕೆಯೋ, ತಂತ್ರಜ್ಞಾನದ ಬೆಳವಣಿಗೆಯೋ, ಇಲ್ಲವೆ ದುರಾಸೆಯೋ ಮಲೆನಾಡಿದಲ್ಲಿ ಮಲೆಗಳ ನಾಶವು ಹೆಚ್ಚಾಗಿದ್ದು ಪೂರ್ಣವಾಗಿ ಹವಾಮಾನದಲ್ಲಿ ಬದಲಾವಣೆಯನ್ನು ತಂದಿದೆ. ಹಿರಿಯರು ಅಂದಾಜಿಸುತಿದ್ದ ಹವಾಮಾನಗಳ ಅವಧಿ ಈಗ ಅಂದಾಜು ಮಾಡಲಾಗದಷ್ಟು ಆಳವಾಗಿ ಹೋಗಿಬಿಟ್ಟಿವೆ. ಯಾವಾಗ ಮಳೆ ಬರುವುದೋ, ಚಳಿಗಾಲ ಇರುವುದೇ, ಯಾವಾಗ ಶುರು ಅಥವಾ ಅಂತ್ಯವೆಂಬುದು ತಿಳಿಯದಂತಾಗಿದೆ. ಮಲೆಗಳಿಲ್ಲದೆ ಮುಂದೊಮ್ಮೆ ಮಲೆನಾಡು "ಮಲೆಗಳಿಲ್ಲದ ನಾಡು" ಆಗುವದು ಎಂಬ ಭಾಸವಾಗುತ್ತಿದೆ.

ಸರಿಸುಮಾರು ಐದಾರು ವರ್ಷಗಳ ಹಿಂದಿನಿಂದ (ಅಂದಾಜು ೨೦೦೨ - ೨೦೦೩) ಮಲೆನಾಡಿನ ಪ್ರತಿಯೊಂದು ಮನೆಯಲ್ಲಿಯೂ ಕೂಡ ಗಾಳಿಯಂತ್ರ (ಫ್ಯಾನ್)ಗಳ ಬಳಕೆ ಹೆಚ್ಚಾಗುತ್ತಿದೆ. ನಮ್ಮ ಮನೆಯ ಬಗ್ಗೆಯೇ  ಹೇಳಬೇಕೆಂದರೆ, ಬೇಸಿಗೆಗಾಲಕ್ಕೂ ಹೊದಿಕೆ ಹಾಕಿ ಮಲಗುತಿದ್ದವರು ಈಗ ಗಾಳಿಯಂತ್ರಗಳಿಲ್ಲದೆ ಮಲಗುವುದು ಕಷ್ಟವಾಗಿಬಿಟ್ಟಿದೆ. ಹಾಲು, ತರಕಾರಿಗಳು ಹಲವಾರು ದಿನಗಳವರೆಗೆ ಇಡಬಹುದಾದ ಊರಿನಲ್ಲೇ ಶೀತಲೀಕರಣ ಯಂತ್ರ(ಫ್ರಿಡ್ಜ್)ದ ಅವಶ್ಯಕತೆ ಬಂದುಬಿಟ್ಟಿದೆ. ತಾಪಮಾನ ಹೆಚ್ಚಿದೆ, ಮಳೆ ಸಮಯಕ್ಕೆ ಬರುತಿಲ್ಲ, ಚಳಿಗಾಲವಂತು ತಿಳಿಯುತ್ತಲೇ ಇಲ್ಲ.

ಮಾನವನೆಂಬುದು ಈ ಭೂಮಿಯ ಒಂದು ಜೀವಿಯಾದರೂ, ಭೂಮಿಯನ್ನೇ ನಾಶ ಮಾಡುವ ದುರ್ಗುಣ ನಮ್ಮಲ್ಲಿ ಮಾತ್ರ ಇರುವುದು. ಹೆಚ್ಚು ಬುದ್ದಿವಂತಿಕೆ ಸ್ವಯಂ ನಾಶಕ್ಕೆ ಕಾರಣವಾಗುವ ಮಾತು ಇಲ್ಲಿ ವಾಸ್ತವಕ್ಕೆ ಬರುತ್ತಿದೆ. ಇವೆಲ್ಲವು ಪ್ರಕೃತಿ ವಿಕೋಪಕ್ಕೆ ಕಾರಣವಾಗಿ ಮುಂದೊಮ್ಮೆ ಮನುಕುಲವೆಂಬುದೇ ಅಳಿಸಿಹೋಗುವುದಂತು ನಿಜ. ಈಗಲೂ ಸಮಯ ಮಿಂಚಿಲ್ಲ, ಪ್ರತಿಯೊಬ್ಬರು ಮರ ನೆಡುವ ಮೂಲಕ, ಪರಿಸರ ಮಾಲಿನ್ಯ ನಿಯಂತ್ರಣ ಮಾಡುವ ಮೂಲಕ ಮತ್ತೊಮ್ಮೆ ಈ ಭುವಿಯನ್ನು ಹಸಿರಾಗಿಸಬಹುದು. ಇದು ನನ್ನದೋ ಅಥವಾ ಬರಿ ನಿನ್ನದೋ ಭುವಿಯಲ್ಲ, ನಮ್ಮೆಲ್ಲರ ಭುವಿ. ಪ್ರತಿಯೊಬ್ಬರ ಖಾಳಜಿಯು ಇಲ್ಲಿ ಅತಿಅವಶ್ಯಕ.

ಭಾನುವಾರ, ಏಪ್ರಿಲ್ 2, 2017

“ಸಮಯ ಮತ್ತು ಆಲೋಚನೆ” – ನಿಖರ ಮಾತು 3



ಜೀವನದಲ್ಲಿ ಏನೋ ಮಾಡಬೇಕೆಂಬ ಉತ್ಸಾಹ, ಆದರೆ ಮಾಡುವುದಾದರೂ ಏನು ? ಯಾವುದು ನನ್ನ ಗುರಿ? ನಾನು ತಪ್ಪಾದ ಹಾದಿಯಲ್ಲಿರುವನೇ? ಹೀಗೆ ಹಲವಾರು ಯೋಚನೆಗಳನ್ನ ಮಾಡುತ್ತಾ ಸಮಯ ಕಳೆಯುತಿದ್ದ ನನಗೆ ತಕ್ಷಣ ಮನದಿಂದ ಬಂದ ಉತ್ತರ “ಇಲ್ಲ, ನಿನ್ನ ಹಾದಿ ಸರಿಯಾಗಿದೆ, ಏನೋ ನಿನ್ನಿಂದಾಗಬೇಕು ಅದಕ್ಕೆ ಇಲ್ಲಿದ್ದೀಯ, ಅದು ಆಗುವುದಂತು ನಿಜ, ನಿನ್ನ ಪ್ರಯತ್ನ ಹಾಗು ಚಟುವಟಿಕೆಗಳನ್ನು ಬಿಡಬೇಡ.”

ಹೌದಲ್ಲವೆ?, ಇದು ನಿಜವೆಂದು ಅನಿಸತೊಡಗಿತು. ತಕ್ಷಣವೆ ಮನಸ್ಸನ್ನು ಬೇರೊಂದು ಚಟುವಟಿಕೆಗಳಲ್ಲಿ ಮಗ್ನನಾಗಿರಸುವಂತೆ ಮಾಡಿತು. ಪ್ರತಿದಿನದ ವ್ಯಾಯಾಮ, ದಿನಕ್ಕೆ ಸ್ವಲ್ಪ ಪುಸ್ತಕ ಓದುವುದು, ಅಡುಗೆ ಮಾಡುವುದು, ಕೊಂಚ ಹೊಸ ಭಾಷೆ ಅಥವಾ ವಿಷಯಗಳನ್ನು ಕಲಿಯುವುದು ಇಲ್ಲವೇ ಕವಿತೆ-ಲೇಖನಗಳನ್ನ ಬರೆಯುವುದು ಹೀಗೆ ಏನಾದರೂ ಚಟುವಟಿಕೆಗಳಲ್ಲಿ ತೊಡಗಿರುವ ನಾನು ಎಲ್ಲೋ ಗುರಿ ತಲುಪಲು ಇವುಗಳು ಸಹಾಯ ಮಾಡುವುದೆಂಬ ನಂಬಿಕೆ. ಸಮಯವನ್ನು ಬಳಸಿರಿ ಇಲ್ಲವೇ ಹಾಗೆ ಕಳೆಯಿರಿ, ಖಂಡಿತವಾಗಿಯೂ ಸಮಯವಂತು ನಿಮಗಾಗಿ ನಿಲ್ಲುವುದಿಲ್ಲ. ನಮ್ಮ ಜೀವನದ ಈ ಸಮಯವನ್ನು ಹಾಗೆಯೇ ಕಳೆಯುವುದರ ಬದಲು ಏನಾದರೂ ಮಾಡುತ್ತಾ ಕಳೆಯುವ ಅಂತ ಈ ರೀತಿ ಚಟುವಟಿಕೆಗಳಿಗೆ ಮುನ್ನುಡಿ ಹಾಕಿದೆ. ಪ್ರತಿಯೊಂದು ಕಾರ್ಯಕ್ಕೂ ಪ್ರತಿಫಲ ಸಿಗುವುದೋ ಇಲ್ಲವೋ, ಸಮಯವೆಂಬ ಅಮೂಲ್ಯ ಮೂಲಭೂತವನ್ನು ಬಳಸಿದೆನೆಂಬ ನೆಮ್ಮದಿ ದೊರೆಯುವುದು.

ಯಾವುದೋ ಒಂದು ಮಾದ್ಯಮದಲ್ಲಿ ತುಂಬಾ ಒಳ್ಳೆಯ ವಾಕ್ಯವೊಂದನ್ನು ಕಂಡೆನು. “ಸಾಧ್ಯ ಹಾಗು ಅಸಾಧ್ಯ ಇವೆರಡು ಕೂಡ ಸರಿಯಾದದ್ದೆ”, ಇದರ ಬಗ್ಗೆ ಯೋಚಿಸಿದಾಗ ನನಗೆ ತೋಚಿದ್ದು “ಹೌದು”. ಯಾವುದೇ ವಿಷಯದ ಆಯ್ಕೆಯು ಒಂದು ನಿರ್ದಿಷ್ಟ ಹಾದಿಯನ್ನು ತೋರಿಸುವುದು, “ಸಾಧ್ಯ”ವೆಂದರೆ ಅದೊಂದು ಹಾದಿಯಾದರೆ “ಅಸಾಧ್ಯ”ವೆಂಬುದು ಇನ್ನೊಂದು ಹಾದಿಯಲ್ಲಿ ಕರೆದುಕೊಂಡು ಹೋಗುವುದು. ಈಗೆ ಯೋಚಿಸುತ್ತಾ ಆಲೋಚನೆಗಳು ಎಷ್ಟು ಆಳಕ್ಕೆ ಹೋಯಿತೆಂದರೆ “ಇಲ್ಲಿ ಯಾವುದು ಕೂಡ ತಪ್ಪಲ್ಲ, ಎಲ್ಲವೂ ಸರಿ” ಎಂಬ ನಿರ್ಧಾರಕ್ಕೆ ಬರುವಂತೆ ಮಾಡಿತು. ಎಲ್ಲಾ ವಿಷಯಗಳಿಗೂ ಅದರದೇ ಆದಂತಹ ಅರ್ಥವಿರುವುದೆಂದು ಅರಿವಾಯಿತು. ಕೆಲವೊಮ್ಮೆ ಕೆಲವರ ಕೆಲವು ಮಾತುಗಳು ಕೂಡ ಸರಿಯಿಲ್ಲವೆಂದು ಎನಿಸುವುದುಂಟು, ಖಂಡಿತವಾಗಿಯೂ ಅದು ಬೇರೊಂದು ಬಗೆಯಲ್ಲಿ ಸರಿಯಾಗೇ ಇರಬಹುದು. ಎಲ್ಲಾ ಅವರವರ ಯೋಚನೆಗೆ ಬಿಟ್ಟದ್ದು. ಯೋಚನೆಗಳ ಆಳವು ಅನಂತವೆಂಬುದನ್ನು ನಾನು ತಿಳಿದುಕೊಂಡೆ.

ಈ ಮೆದುಳು ಎಂಬುವ ಜೀವಿಯಲ್ಲಿರುವ ಅದ್ಭುತ ಅಂಗ, ಕೆಲ ವಿದ್ಯುತ್ ಸಂದೇಶಗಳಲ್ಲಿ ಏನೇನೋ ಬದಲಾಯಿಸಿಬಿಡುತ್ತದೆ. ಹೀಗೆ ಯೋಚನೆಗಳಲ್ಲಿ ಮಗ್ನರಾಗಿರುವ ನಾನು ನನ್ನ ಗುರಿಯ ಚಿತ್ರಣ ನೋಡುವ ಸಮಯವು ತುಂಬಾ ಹತ್ತರದಲ್ಲಿರುವುದು, ಕೆಲದಿನಗಳೇ ಬಾಕಿ ಇದೆ ಅಂತ ಈ ಮನಕ್ಕೆ ಮುನ್ಸೂಚನೆ ಕೊಡುತ್ತಾ ಇರುತ್ತೆ. ನನ್ನಲ್ಲಿರುವ ಈ ಛಲ, ಶಕ್ತಿ ಎಲ್ಲಾದರೂ ಬಳಸಿ ಏನಾದರೂ ಬದಲಾವಣೆಗೆ ಕ್ರಾಂತಿ ಹೂಡಬೇಕೆಂಬ ತವಕದಲ್ಲೇ ಇರುವೆನು. ಯಾರಿಗೆ ಗೊತ್ತು! ಇವೆಲ್ಲವು ವಯಸ್ಸಿನ ಮಾಯೆಯೋ ಇಲ್ಲವೆ ಮನಸಿನ ಆಟವೇ! ಆದರೆ ಪ್ರತಿದಿನವು ಅದೇ ಶಕ್ತಿ, ಅದೇ ಛಲ ನನ್ನನ್ನು ಹುಮ್ಮಸ್ಸಿನಿಂದ ಇರಲು ಸಹಾಯ ಮಾಡುತ್ತಿರುತ್ತೆ. “ತಾಳ್ಮೆಯೊಂದಿದ್ದರೆ ಎಲ್ಲವೂ ಸಿಗುವುದು” ಎಂದು ಹೇಳಿರುವ ನಮ್ಮ ಹಿರಿಯರು, ಅವರ ಮಾತಿಗೆ ಬೆಲೆ ನೀಡಿ ತಾಳ್ಮೆಯಿಂದಲೇ ಎಲ್ಲವ ಅನುಸರಿಸಿ ಹೊಗುತ್ತಿರುವೆನು. ಸಾಧನೆಯೇ ಜೀವನದ ಗುರಿಯಿಲ್ಲದಿರಬಹುದು,ಆದರೆ ನಮ್ಮ ಜೀವನಕ್ಕೆ ಅರ್ಥ ಕಲ್ಪಿಸುವುದು ನಮ್ಮದೇ ಜವಬ್ದಾರಿಯಾಗಿರುವುದರಿಂದ ಆ ಅರ್ಥವನ್ನು ಕಟ್ಟುವ ಪ್ರಯತ್ನವು, ಬೆಳೆಸುವ ಶಕ್ತಿಯೂ ಸಿಗಲಿ ಅಂತ ಸಂಕಲ್ಪಿಸತ್ತಾ ಇಂದಿನಿಂದಲೇ ಸಮಯದ ಜೊತೆಯಲ್ಲೇ ಆಲೋಚನೆಗಳ ಸಾಗರದಲ್ಲಿ ಈಜುವ ಎಂಬುದು ನನ್ನ ಆಶಯ.

ಶುಕ್ರವಾರ, ಜನವರಿ 27, 2017

“ಕನಸಿನ ಲೋಕದಲಿ” – ನಿಖರ ಮಾತು 2



ಕನಸ್ಸು, ಇದೊಂದು ವಿಚಿತ್ರ ಹಾಗು ಸೋಜಿಗವಾದ ಪ್ರಕ್ರಿಯೆ, ಎಲ್ಲಾ ಮನುಷ್ಯರೂ ಹಾಗು ಜೀವಿಗಳಲ್ಲೂ ಕಾಣಬಹುದಂತಹ ವಿಶೇಷ ಶಕ್ತಿ ಎಂದೆನಬಹುದು. ಕನಸೆಂಬ ಪದಕ್ಕೆ ಅರ್ಥವನ್ನು ಹುಡುಕುತ್ತಾ ಹೋದರೆ ಹಲವಾರು ಕಲ್ಪನೆಗಳು ಮನಸ್ಸಿಗೆ ಮೂಡುತ್ತದೆ. ರಾತ್ರಿ ಮಲಗಿದರೆ ನಿದಿರೆಯಲಿ ಕನಸ್ಸು, ಬೆಳಿಗ್ಗೆ ಎದ್ದರೆ ಹಗಲುಗನಸು, ಭವಿಷ್ಯದ ಬಗ್ಗೆಯ ಹಲವಾರು ಕನಸುಗಳು ಹೀಗೆ ಇದೊಂದು ಕೊನೆಯಿಲ್ಲದ ಹಾಗು ಜೀವನದಲ್ಲಿ ಹೆಚ್ಚುಕಾಲ ಕಳೆಯುವಂತಹ ಲೋಕ, “ಕನಸಿನ ಲೋಕ”.

ಕನಸಲಿ ಇಲ್ಲದನ್ನು ಪಡೆಯಬಹುದು, ಆಗದನ್ನೂ ಸಾಧಿಸಬಹುದು, ಆದರೆ ಇದು ಕಾಲ್ಪನಿಕವಷ್ಟೆ. ಈ ರೀತಿ ಕನಸುಗಳನ್ನು ಕಾಣುತ್ತಿರುವ ನಾವು ನಿಜವಾಗಿ ಎಚ್ಚರವಿರುವುದೇ ಕೆಲವು ಕ್ಷಣಗಳು ಮಾತ್ರ. ಎಷ್ಟೇ ಪ್ರಯತ್ನಪಟ್ಟು ವರ್ತಮಾನಕಾಲಕ್ಕೆ ಬಂದರೂ ಕೆಲಕ್ಷಣದಲ್ಲೇ ನಮ್ಮದೆ ಆದಂತಹ ಕಾಲ್ಪನಿಕ ಲೋಕಕ್ಕೆ ಹೋಗಿಬಿಡುತ್ತೇವೆ. ಇದೊಂತರಹದ ಕನಸ್ಸಾದರೆ ಜೀವನದಲ್ಲಿ ಸಾಧಿಸುವ, ಗುರಿ ತಲುಪುವ ಕನಸ್ಸು ಇನ್ನೊಂದು.

ಸಾಧಿಸಬೇಕು ಎಂಬ ಕನಸ್ಸು ಅದು ನಮ್ಮ ಗುರಿಯನ್ನು ತೋರಿಸುತ್ತದೆ. ಕನಸ್ಸೆಂಬುದು ಮುನ್ನುಡಿಯಷ್ಟೇ, ಆದರೆ ಇಡೀ ಜೀವನವೆಂಬ ಪುಸ್ತಕವನ್ನು ನಾವೇ ಬರೆಯುವ ಪ್ರಯತ್ನ ಮಾಡಬೇಕು. ಆಗ ಮಾತ್ರ ಕನಸ್ಸೆಂಬುದನ್ನು ನನಸ್ಸಾಗುವ ದಾರಿಯಲಿ ಸಾಗಿಸಬಹುದು. ಆದರೆ ನಾವು ಮುನ್ನುಡಿ ಬರೆಯುತ್ತಾ ಪುಸ್ತಕ ಖಾಲಿ ಉಳಿಸಿದರೆ ಕನಸ್ಸಿಗೆ ಬೆಲೆಯಾದರು ಎಲ್ಲಿರುವುದು. ಕನಸಿನ ಜೊತೆ ಪ್ರಯತ್ನವು ಹಾಗು ಜೀವನವೆಂಬ ಪುಸ್ತಕವನ್ನು ಬರೆಯುವ ಸಾಹಸವ ಮಾಡುವುದು ಮುಖ್ಯ.ಇವೆರಡರ ಹೊರತು ಕನಸ್ಸು ಕನಸ್ಸಾಗಿಯೆ ಉಳಿದಿರುವುದು. ಇಲ್ಲವಾದಲ್ಲಿ ಬದುಕಿನ ಕೊನೆಯ ಪುಟ ಬಂದಾಗಲು ಇಡೀ ಪುಸ್ತಕವು ಖಾಲಿಯಾಗಿಯೇ ಉಳಿದಿರುತ್ತದೆ. ಆದರೆ ನಮ್ಮಂತಹ ಯುವಜನತೆಯಲ್ಲಿ “ಪ್ರಯತ್ನ” ಹಾಗೂ “ಸಾಹಸ”ದ ಕೊರತೆಯೇ ಇರುವುದು ಹೊರತು ಕನಸ್ಸುಗಳುಂಟು ನೂರೆಂಟು.

ಒಂದು ಮಗು ಶಾಲೆಗೆ ಹೋಗುವಾಗ “ನಾನು ಬಸ್ಸ್ ಚಾಲಕನಾಗಬೇಕು” ಎಂದು, “ಶಿಕ್ಷಕಿ” ಯಾಗಬೇಕೆಂದು ಇಲ್ಲವೇ “ಪೋಲೀಸ್ ಆಗುವೆ” ಎಂದು ಕನಸ್ಸು ಕಂಡಿರುತ್ತದೆ. ವಯಸ್ಸಿನಲಿ ದೊಡ್ಡವನಾಗುತ್ತಿದ್ದಂತೆ ಕನಸುಗಳು ಗೌರವದ ರೂಪದಲ್ಲೋ ಇಲ್ಲವೇ ಹಣ-ಅಂತಸ್ತಿನ ರೂಪದಲ್ಲಿ ಪರಿವರ್ತನೆಗೊಳ್ಳುತ್ತೆ. ಆದ್ದರಿಂದ ರೈತರ ಸಂಖ್ಯೆ ಕಡಿಮೆಯಾಗುತ್ತಾ ಕೃಷಿವೆಂಬುವ ಮಾನವನಿಗೆ ಆಧಾರವಾದ ಉದ್ಯೋಗವು ಅಂತ್ಯಗೊಳ್ಳುತ್ತರುವುದಲ್ಲದೆ ಬರೀ ಇಂಜಿನೀಯರ್ ಹಾಗು ಡಾಕ್ಟರ್ಗಳ ಸಂಖ್ಯೆ ಹೆಚ್ಚಾಗಲು ಒಂದು ಕಾರಣವಾಗಿದೆ. ಇದರ ಫಲ “ನಿರುದ್ಯೋಗ”. ಹೀಗೆ ಕನಸುಗಳು ಗೌರವ ಹಾಗು ಹಣ-ಅಂತಸ್ತಿನ ಪಾಲಗುತ್ತದೆಯೋ ಆ ಸ್ವಾರ್ಥಭಾವನೆ ಜೀವನದಲ್ಲಿ ಇವೆರಡು ಎಷ್ಟೇ ಲಭಿಸಿದರೂ ಅಸಂಪೂರ್ಣದ ಅರಿವು ಮೂಡಿ ಮನಸಿಗೆ ಜಿಗುಪ್ಸೆಯನ್ನುಂಟು ಮಾಡುತ್ತದೆ. ಅದಲ್ಲದೆ ಎಲ್ಲಾ ಇಂಜಿನೀಯರ್ ಹಾಗು ಡಾಕ್ಟರ್ ಗಳು ಸಾರ್ಥಿಗಳೆಂದು ಹೇಳಲು ಸಾಧ್ಯವಿಲ್ಲ, ಸಾಧಿಸುವ ಮನವುಳ್ಳರೂ ಇರುವರು.

ರಾತ್ರಿ ಬೀಳುವ ಕನಸಿಗೂ ಜೀವನದ ಕನಸಿಗೂ ಏನೋ ಸಂಭಂದ ಇದೆ, ಅದೇನಂದರೆ ಎಲ್ಲಾ ರಾತ್ರಿ ಬೀಳುವ ಕನಸ್ಸು ಮುಂಜಾನೆ ಏಳುವಾಗ ನೆನಪಲ್ಲಿರದು. ಹಾಗೆಯೇ ಜೀವನದಲ್ಲಿ ಕಾಣುತ್ತಿರುವ ಕನಸುಗಳನ್ನು ಒಂದು ಕಡೆಯಿಂದ ಮರೆಯುತ್ತಾ ಬರುತ್ತೇವೆ. “ಕನಸು ಕಾಣಿರಿ” ಎಂದು ಹೇಳಿದ ಅಬ್ದುಲ್ ಕಲಾಂರವರ ಮಾತುಗಳನ್ನು ಅನ್ಯರ್ಥ ಮಾಡಿಕೊಂಡ ನಮ್ಮ ಯುವಕರು “ಕಾಣುವ ಕನಸ್ಸು ನೀವು ಮಲಗಿದರೂ ನಿದಿರೆಯನ್ನು ಮಾಡಬಿಡದೆ ಕಾಡುತ್ತಿರಬೇಕು” ಎಂಬುವ ಉಳಿದ ಮಾತನ್ನು ಅರಿಯದೇ ನಿದ್ದೆ ಮಾಡುತ್ತಾ ಕನಸ್ಸನ್ನು ಕಾಣಲು ಶುರುಮಾಡಿದ್ದರೆ. ಏನೊಂದು ವಿಪರ್ಯ್ಯಸ.

ಯಾವುದೇ ಸಾಧನೆಗೆ ಕನಸ್ಸು ಮುಖ್ಯ, ಇಲ್ಲವಾದಲ್ಲಿ ಈ ಆಧುನಿಕ ಯುಗವು ಈ ಮಟ್ಟಿಗೆ ತಲುಪಿರುವುದಲ್ಲಿ ಅನುಮಾನ ಪಡಬೇಕಾದೀತು. ಎಂತಹ ಕನಸ್ಸುಗಳಿರಲಿ ಪ್ರಯತ್ನವಂಬುದು ನಡೆಯಲೇಬೇಕು. ಗೆಲುವನ್ನು ಕಾಣುವುದು ಕನಸ್ಸಾಗಿರಬೇಕು ಹೊರತು ಸೋಲು ಬಾರದಿರಲಿ ಎಂಬುವ ಕನಸ್ಸ ನೆನೆಯಬೇಡಿ. ಸೋಲೆಂಬುದು ಗುರುವಿದ್ದಂತೆ, ಜೀವನ ಪಾಠ ಕಲಿಸುತ್ತದೆ. ಇದನ್ನರಿಯದ ಹಲವರು ಸೋಲು ಬರದಿರಲಿ ಎನ್ನುತ್ತಾ ಒಮ್ಮೆ ಸೋತೊಡನೆ ಆ ಅಧ್ಬುತ ಕನಸ್ಸನ್ನೇ ಕೈಬಿಡುವರು. ಸೋಲು ಎಷ್ಟೇ ಆಗಲಿ ಗೆಲುವೇ ಪರಮ ಲಕ್ಷ್ಯ ಎಂದರಿತರೆ ಗುರಿ ಮುಟ್ಟುವುದರಲ್ಲಿ ಅನುಮಾನವೇ ಇಲ್ಲವೆಂಬುವ ನನ್ನ ಅಭಿಪ್ರಾಯ.

ಒಡನಾಡಿಗಳೇ,
ಕನಸ್ಸೆಂಬ ಶಿಖರದಲಿ,
ಪ್ರಯತ್ನಗಳ ಸುರಿಮಾಲೆಯಿರಲಿ..
ಕಷ್ಟಗಳೇ ಕಲ್ಲುಮುಳ್ಳುಗಳಿಲ್ಲಿ,
ಸೋಲಿಗೆ ಬಗ್ಗದಿರಲಿ,
ಏನೇ ಆಗಲೀ,
ಈ ಜೀವನ ಗುರಿಯನ್ನು ತಲುಪಲಿ….

ಬುಧವಾರ, ಅಕ್ಟೋಬರ್ 12, 2016

“ಪ್ರಕೃತಿಯೇ ಮೂಲ, ಪ್ರಕೃತಿಯೇ ಅಂತ್ಯ” – ನಿಖರ ಮಾತು 1


ಈ ಆಧುನಿಕ ಯುಗದಲ್ಲಿ ಉತ್ತಮವಾದ ತಂತ್ರಜ್ನಾನಗಳನ್ನು ಬಳಸುತ್ತಾ ಎಲ್ಲಾ ಭೂಜೀವಿಗಳಿಗಿಂತಲೂ ಬುದ್ದಿಶಾಲಿ ಜೀವಿ “ಮಾನವ” ಎಂದುಕೊಳ್ಳುವಷ್ಟು ಮುಂದುವರೆದಿದ್ದೇವೆ. ಆದರೆ ಈ ಎಲ್ಲಾ ಜ್ಞಾನ, ಬುದ್ದಿಶಾಲಿತನದ ಮೂಲವು ಯಾವುದೆಂದು ಸ್ವಲ್ಪ ಯೋಚಿಸಬೇಕಾಗಿದೆ. ನಾವು ಇದನ್ನು ಮರೆತಿದ್ದೇವೆ. ನಮಗೆ ತಿಳಿಯದಂತೆ ಈ ಮೂಲವನ್ನು ನಾಶಮಾಡಿಕೊಂಡು ಬಂದಿದ್ದೇವೆ. ಅದೇ ಈ ಸುಂದರವಾದ “ಪ್ರಕೃತಿ”. ಎಲ್ಲಾ ವಿಷಯಗಳಿಗೂ, ತಂತ್ರಜ್ಞಾನಗಳಿಗೂ ಹಾಗು ನಾವು ಬದುಕಲು ರೂಡಿಸಿಕೊಂಡು ಬಂದಂತಹ ಪ್ರತಿ ಉದ್ಯೋಗವು ಕೂಡ ಇದೆ ನಿಸರ್ಗದ ಕಾಣಿಕೆಯಾಗಿದೆ. ಬನ್ನಿ ಒಮ್ಮೆ ಪ್ರಕೃತಿಯೊಳಗೆ ನಮ್ಮ ಚಿಂತನೆಯನ್ನು ಹರಿಸುವ.

ಮಾನವನು ಈ ಪ್ರಕೃತಿಯನ್ನು ನೋಡುತ್ತಾ ಬೆಳೆಯುತ್ತಾ ಬಂದಿರುವನು ಹಾಗೆ ಈತನ ಮೆದುಳು ಅದ್ಭುತ ಯೋಚನಾಶಕ್ತಿಯ ಆಗರವಾಗಿದ್ದು ಈ ಪರಿಸರವನ್ನು ಬಗೆಬಗೆಯಿಂದ ನೋಡುಲಾರಂಬಿಸಿದನು. ಈ ಪರಿಸರವನ್ನು ನೋಡಿ ಆನಂದಿಸಿದನು. ಅಲ್ಲದೆ ಈ ಆನಂದವನ್ನು ಅದ್ಭುತವಾಗಿ ವರ್ಣಿಸಲಾರಂಬಿಸಿದ, ಈತನು “ಕವಿ”ಯಾದ. ಈ ಸೌಂದರ್ಯವನ್ನ ಚಿತ್ರದ ಮೂಲಕ ಮೂಡಿಸಿ “ಕಲಾವಿದ”ನಾದನು. ಹೀಗೆ ಹೋಗುತ್ತಾ ಕ್ರಮೇಣ ಪ್ರಕೃತಿಯ ವಿಚಿತ್ರ ಸಂಗತಿಗಳನ್ನ ನೋಡಿ “ಇದು ಏಕೆ? ಅದು ಹೇಗೆ?” ಎನ್ನುತ್ತಾ ತನ್ನಲ್ಲಿ ಹಲವಾರು ಪ್ರಶ್ನೆಗಳನ್ನ ಕೇಳಲಾಂಬಿಸಿದನು. ಈತನ ಪ್ರಶ್ನೆಗಳು ಈತನನ್ನು ಸಂಶೋಧನೆಯಲ್ಲಿ ತೊಡಗುವಂತೆ ಮಾಡಿತು. ಈತ “ವಿಜ್ಞಾನಿ” ಎಂದು ಎನಿಸಿಕೊಂಡ. ಅದ್ಭುತವಾದ ಸಂಶೋಧನೆಯಿಂದ ಹಲವಾರು ರಹಸ್ಯಗಳನ್ನು ಭೇದಿಸಲು ಆರಂಭಿಸಿದ.

ಮುಂದುವರೆಯುತ್ತ ಮಾನವನು ಈ ನಿಸರ್ಗವನ್ನು ಬೆಳೆಸುವುದನ್ನು ಚೆನ್ನಾಗಿ ಕಲಿತ, ತನ್ನ ಹೊಟ್ಟೆಪಾಡಿಗಾಗಿ ಆಹಾರ ಪದಾರ್ಥಗಳನ್ನು, ಸಸ್ಯಗಳನ್ನು ಬೆಳೆಸುವುದಲ್ಲದೆ ಪ್ರಾಣಿಗಳ ಸಾಕಣೆಯಲಲ್ಲಿಯು ನಿಪುಣನಾಗಿ “ರೈತ” ಎಂದು ಹೇಳಲ್ಪಟ್ಟನು. ವಾಸಕ್ಕಾಗಿ ಮರದ ಸಲಕರಣೆಗಳ ಮಾಡಿ “ಕಮ್ಮಾರ”ನೂ, ದೇಹ ರಕ್ಷಣೆಯ ಸಲುವಾಗಿ ಚರ್ಮದ ತೊಡುಗೆಗಳನ್ನ ಮಾಡಿ “ಚಮ್ಮಾರ”ನಾಗಿಯೂ, ಕಲ್ಲಿನ ಮೂರ್ತಿಗಳ ಮಾಡಿ “ಶಿಲ್ಪಿ”ಯಾಗಿ ಬೆಳೆದು ನಿಂತನು. ಹೀಗೆ ಹಲವಾರು ಬದಲಾವಣೆಗಳನ್ನು ತಂದುಕೊಂಡ ಮಾನವ ತಂತ್ರಜ್ಞಾನವನ್ನು ಇಲ್ಲಿಯವರೆಗೆ ತರಲು ಯಶಸ್ವಿಯಾದ. ಸ್ನೇಹಿತರೇ, ಇದಕ್ಕೆಲ್ಲವೆ ಈ ಪ್ರಕೃತಿಯೇ ಕಾರಣವೆಂದು ಅನುಸುತಿಲ್ಲವೇ? ಈ ನಿಸರ್ಗದಿಂದಲೇ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಔಷಧೀಯ ಮೂಲವನ್ನು ತೋರಿಸಿಕೊಟ್ಟ “ಮಹರ್ಷಿ ಪತಂಜಲಿ”ಯವರು ಆಯುರ್ವೇದದ ಪಿತಾಮಹವೆಂದಿಸಿಕೊಂಡರು. ಪ್ರತೀ ಪುರಾಣಗಳಲ್ಲೂ ಈ ಪ್ರಕೃತಿ ಮಹತ್ವಪೂರ್ಣವಾದ ಪಾತ್ರವಹಿಸುತ್ತದೆ. ನೀವು ಕೂಡ ಯಾವುದೇ ವಿಷಯ ಅಥವಾ ಉದ್ಯೋಗವನ್ನೆ ನೆನೆದು ಅದರ ಮೂಲವ ಹುಡುಕಲು ಪ್ರಯತ್ನಿಸಿ, ಅದು ಈ ಪ್ರಕೃತಿದೇವಿಯ ಮಡಿಲಿಗೆ ಕೊನೆಯಲಿ ತಲುಪುದು.

ಈ ಪ್ರಕೃತಿಯಲ್ಲಿ ದೊರಕದ ವಿಷಯಗಳಿಲ್ಲ, ಎಲ್ಲಾ ಪ್ರಶ್ನೆಗೂ ಉತ್ತರ ಇಲ್ಲೇ ದೊರಕುವುದು.ಇಷ್ಟೆಲ್ಲ ಮಹತ್ವವೆಂದೆನಿಸಿಕೊಂಡರೂ ಈಗ ಈ ಪರಿಸರವು ಈ ಮಾನವನಿಂದಲೇ ನಾಶಗೊಳ್ಳುತ್ತಿದೆ, ಎಂತಹ ಒಂದು ದುರ್ದೈವ ! ತನ್ನ ಅಭಿವೃದ್ದಿ ಹಾಗು ಸಕಲ ಜ್ಞಾನವು ಈ ನಿಸರ್ಗದ ಕಾಣಿಕೆಯೆಂಬುದನ್ನು ಮರೆತು ತನ್ನ ಸ್ವಾರ್ಥಕ್ಕಾಗಿಯೂ ಮತ್ತು ತನ್ನ ಐಷರಾಮಿ ಜೀವನಕ್ಕಾಗಿ ನಿಸರ್ಗದ ನಾಶದ ಹಾದಿಯನ್ನು ಹಿಡಿದಿದ್ದಾನೆ. ಈ ಪರಿಸರವನ್ನು ನೋಡುತ್ತಿರುವ ಮಾನವ “ಇದು ನಮಗಾಗಿ ದೊರೆತ ಕಾಣಿಕೆ” ಎಂದೆನ್ನುವ ಬದಲು “ಯಾರದೋ ಸ್ವತ್ತು, ಲಾಭ ನನಗೆ” ಎಂದು ಅರಣ್ಯ ಸಂಪತ್ತನ್ನೇ ಲೂಟಿ ಮಾಡುತ್ತಾ ಬಂದಿದ್ದಾನೆ.

ಆದರೆ, ನಮ್ಮ ಆದಿ ಪ್ರಕೃತಿಯಾಗಿದ್ದರಿಂದ ಇದರ ಅಂತ್ಯವು ನಮ್ಮ ಅಂತ್ಯವಾಗಿಯೂ ಇರುವುದು. ಇದರ ಬಗ್ಗೆ ಬುದ್ದಿವಂತ ಮಾನವ ಗಂಭೀರವಾಗಿ ಯೋಚಿಸಬೇಕಾಗಿದೆ. ಈಗಾದರು ಎಚ್ಚೆದ್ದು ಪ್ರಕೃತಿಯ ಉಳಿವಿಗಾಗಿ ಮತ್ತು ಬೆಳೆಸುವ ಪ್ರಯತ್ನವನ್ನ ಮಾಡಬೇಕಾಗಿದೆ. ಪ್ರಕೃತಿಯ ರಕ್ಷಣೆಯೇ ನಮ್ಮ ಸ್ವರಕ್ಷಣೆಯಾಗಿದೆ. ಇದು ಈ ಮಾನವಕುಲದ ಅಭಿವೃದ್ದಿಯೊಂದಲ್ಲದೆ ರಾಷ್ಟ್ರದ ಸಮೃದ್ಧ ಬೆಳವಣಿಗೆಗೂ ದಾರಿಯಾಗುವುದು.