ಭಾನುವಾರ, ಏಪ್ರಿಲ್ 2, 2017

“ಸಮಯ ಮತ್ತು ಆಲೋಚನೆ” – ನಿಖರ ಮಾತು 3



ಜೀವನದಲ್ಲಿ ಏನೋ ಮಾಡಬೇಕೆಂಬ ಉತ್ಸಾಹ, ಆದರೆ ಮಾಡುವುದಾದರೂ ಏನು ? ಯಾವುದು ನನ್ನ ಗುರಿ? ನಾನು ತಪ್ಪಾದ ಹಾದಿಯಲ್ಲಿರುವನೇ? ಹೀಗೆ ಹಲವಾರು ಯೋಚನೆಗಳನ್ನ ಮಾಡುತ್ತಾ ಸಮಯ ಕಳೆಯುತಿದ್ದ ನನಗೆ ತಕ್ಷಣ ಮನದಿಂದ ಬಂದ ಉತ್ತರ “ಇಲ್ಲ, ನಿನ್ನ ಹಾದಿ ಸರಿಯಾಗಿದೆ, ಏನೋ ನಿನ್ನಿಂದಾಗಬೇಕು ಅದಕ್ಕೆ ಇಲ್ಲಿದ್ದೀಯ, ಅದು ಆಗುವುದಂತು ನಿಜ, ನಿನ್ನ ಪ್ರಯತ್ನ ಹಾಗು ಚಟುವಟಿಕೆಗಳನ್ನು ಬಿಡಬೇಡ.”

ಹೌದಲ್ಲವೆ?, ಇದು ನಿಜವೆಂದು ಅನಿಸತೊಡಗಿತು. ತಕ್ಷಣವೆ ಮನಸ್ಸನ್ನು ಬೇರೊಂದು ಚಟುವಟಿಕೆಗಳಲ್ಲಿ ಮಗ್ನನಾಗಿರಸುವಂತೆ ಮಾಡಿತು. ಪ್ರತಿದಿನದ ವ್ಯಾಯಾಮ, ದಿನಕ್ಕೆ ಸ್ವಲ್ಪ ಪುಸ್ತಕ ಓದುವುದು, ಅಡುಗೆ ಮಾಡುವುದು, ಕೊಂಚ ಹೊಸ ಭಾಷೆ ಅಥವಾ ವಿಷಯಗಳನ್ನು ಕಲಿಯುವುದು ಇಲ್ಲವೇ ಕವಿತೆ-ಲೇಖನಗಳನ್ನ ಬರೆಯುವುದು ಹೀಗೆ ಏನಾದರೂ ಚಟುವಟಿಕೆಗಳಲ್ಲಿ ತೊಡಗಿರುವ ನಾನು ಎಲ್ಲೋ ಗುರಿ ತಲುಪಲು ಇವುಗಳು ಸಹಾಯ ಮಾಡುವುದೆಂಬ ನಂಬಿಕೆ. ಸಮಯವನ್ನು ಬಳಸಿರಿ ಇಲ್ಲವೇ ಹಾಗೆ ಕಳೆಯಿರಿ, ಖಂಡಿತವಾಗಿಯೂ ಸಮಯವಂತು ನಿಮಗಾಗಿ ನಿಲ್ಲುವುದಿಲ್ಲ. ನಮ್ಮ ಜೀವನದ ಈ ಸಮಯವನ್ನು ಹಾಗೆಯೇ ಕಳೆಯುವುದರ ಬದಲು ಏನಾದರೂ ಮಾಡುತ್ತಾ ಕಳೆಯುವ ಅಂತ ಈ ರೀತಿ ಚಟುವಟಿಕೆಗಳಿಗೆ ಮುನ್ನುಡಿ ಹಾಕಿದೆ. ಪ್ರತಿಯೊಂದು ಕಾರ್ಯಕ್ಕೂ ಪ್ರತಿಫಲ ಸಿಗುವುದೋ ಇಲ್ಲವೋ, ಸಮಯವೆಂಬ ಅಮೂಲ್ಯ ಮೂಲಭೂತವನ್ನು ಬಳಸಿದೆನೆಂಬ ನೆಮ್ಮದಿ ದೊರೆಯುವುದು.

ಯಾವುದೋ ಒಂದು ಮಾದ್ಯಮದಲ್ಲಿ ತುಂಬಾ ಒಳ್ಳೆಯ ವಾಕ್ಯವೊಂದನ್ನು ಕಂಡೆನು. “ಸಾಧ್ಯ ಹಾಗು ಅಸಾಧ್ಯ ಇವೆರಡು ಕೂಡ ಸರಿಯಾದದ್ದೆ”, ಇದರ ಬಗ್ಗೆ ಯೋಚಿಸಿದಾಗ ನನಗೆ ತೋಚಿದ್ದು “ಹೌದು”. ಯಾವುದೇ ವಿಷಯದ ಆಯ್ಕೆಯು ಒಂದು ನಿರ್ದಿಷ್ಟ ಹಾದಿಯನ್ನು ತೋರಿಸುವುದು, “ಸಾಧ್ಯ”ವೆಂದರೆ ಅದೊಂದು ಹಾದಿಯಾದರೆ “ಅಸಾಧ್ಯ”ವೆಂಬುದು ಇನ್ನೊಂದು ಹಾದಿಯಲ್ಲಿ ಕರೆದುಕೊಂಡು ಹೋಗುವುದು. ಈಗೆ ಯೋಚಿಸುತ್ತಾ ಆಲೋಚನೆಗಳು ಎಷ್ಟು ಆಳಕ್ಕೆ ಹೋಯಿತೆಂದರೆ “ಇಲ್ಲಿ ಯಾವುದು ಕೂಡ ತಪ್ಪಲ್ಲ, ಎಲ್ಲವೂ ಸರಿ” ಎಂಬ ನಿರ್ಧಾರಕ್ಕೆ ಬರುವಂತೆ ಮಾಡಿತು. ಎಲ್ಲಾ ವಿಷಯಗಳಿಗೂ ಅದರದೇ ಆದಂತಹ ಅರ್ಥವಿರುವುದೆಂದು ಅರಿವಾಯಿತು. ಕೆಲವೊಮ್ಮೆ ಕೆಲವರ ಕೆಲವು ಮಾತುಗಳು ಕೂಡ ಸರಿಯಿಲ್ಲವೆಂದು ಎನಿಸುವುದುಂಟು, ಖಂಡಿತವಾಗಿಯೂ ಅದು ಬೇರೊಂದು ಬಗೆಯಲ್ಲಿ ಸರಿಯಾಗೇ ಇರಬಹುದು. ಎಲ್ಲಾ ಅವರವರ ಯೋಚನೆಗೆ ಬಿಟ್ಟದ್ದು. ಯೋಚನೆಗಳ ಆಳವು ಅನಂತವೆಂಬುದನ್ನು ನಾನು ತಿಳಿದುಕೊಂಡೆ.

ಈ ಮೆದುಳು ಎಂಬುವ ಜೀವಿಯಲ್ಲಿರುವ ಅದ್ಭುತ ಅಂಗ, ಕೆಲ ವಿದ್ಯುತ್ ಸಂದೇಶಗಳಲ್ಲಿ ಏನೇನೋ ಬದಲಾಯಿಸಿಬಿಡುತ್ತದೆ. ಹೀಗೆ ಯೋಚನೆಗಳಲ್ಲಿ ಮಗ್ನರಾಗಿರುವ ನಾನು ನನ್ನ ಗುರಿಯ ಚಿತ್ರಣ ನೋಡುವ ಸಮಯವು ತುಂಬಾ ಹತ್ತರದಲ್ಲಿರುವುದು, ಕೆಲದಿನಗಳೇ ಬಾಕಿ ಇದೆ ಅಂತ ಈ ಮನಕ್ಕೆ ಮುನ್ಸೂಚನೆ ಕೊಡುತ್ತಾ ಇರುತ್ತೆ. ನನ್ನಲ್ಲಿರುವ ಈ ಛಲ, ಶಕ್ತಿ ಎಲ್ಲಾದರೂ ಬಳಸಿ ಏನಾದರೂ ಬದಲಾವಣೆಗೆ ಕ್ರಾಂತಿ ಹೂಡಬೇಕೆಂಬ ತವಕದಲ್ಲೇ ಇರುವೆನು. ಯಾರಿಗೆ ಗೊತ್ತು! ಇವೆಲ್ಲವು ವಯಸ್ಸಿನ ಮಾಯೆಯೋ ಇಲ್ಲವೆ ಮನಸಿನ ಆಟವೇ! ಆದರೆ ಪ್ರತಿದಿನವು ಅದೇ ಶಕ್ತಿ, ಅದೇ ಛಲ ನನ್ನನ್ನು ಹುಮ್ಮಸ್ಸಿನಿಂದ ಇರಲು ಸಹಾಯ ಮಾಡುತ್ತಿರುತ್ತೆ. “ತಾಳ್ಮೆಯೊಂದಿದ್ದರೆ ಎಲ್ಲವೂ ಸಿಗುವುದು” ಎಂದು ಹೇಳಿರುವ ನಮ್ಮ ಹಿರಿಯರು, ಅವರ ಮಾತಿಗೆ ಬೆಲೆ ನೀಡಿ ತಾಳ್ಮೆಯಿಂದಲೇ ಎಲ್ಲವ ಅನುಸರಿಸಿ ಹೊಗುತ್ತಿರುವೆನು. ಸಾಧನೆಯೇ ಜೀವನದ ಗುರಿಯಿಲ್ಲದಿರಬಹುದು,ಆದರೆ ನಮ್ಮ ಜೀವನಕ್ಕೆ ಅರ್ಥ ಕಲ್ಪಿಸುವುದು ನಮ್ಮದೇ ಜವಬ್ದಾರಿಯಾಗಿರುವುದರಿಂದ ಆ ಅರ್ಥವನ್ನು ಕಟ್ಟುವ ಪ್ರಯತ್ನವು, ಬೆಳೆಸುವ ಶಕ್ತಿಯೂ ಸಿಗಲಿ ಅಂತ ಸಂಕಲ್ಪಿಸತ್ತಾ ಇಂದಿನಿಂದಲೇ ಸಮಯದ ಜೊತೆಯಲ್ಲೇ ಆಲೋಚನೆಗಳ ಸಾಗರದಲ್ಲಿ ಈಜುವ ಎಂಬುದು ನನ್ನ ಆಶಯ.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ