ಶನಿವಾರ, ಜುಲೈ 27, 2019

ಮಲೆನಾಡು "ಮಲೆಗಳಿಲ್ಲದ ನಾಡು" - ನಿಖರ ಮಾತು 4



ನಾನು ನನ್ನ ಬಾಲ್ಯದ ದಿನಗಳನೊಮ್ಮೆ ನೆನೆದುಕೊಂಡರೆ ನೆನಪಾಗುವುದು ನಮ್ಮನೆಯ ಸುತ್ತಮುತ್ತಲಿನ ಹಸಿರು ಹಸಿರಾದ ಗಿಡಮರಬಳ್ಳಿಗಳು, ಹಲವಾರು ಪ್ರಾಣಿ-ಪಕ್ಷಿಗಳ ಕೂಗು, ವಿಧವಿಧವಾದ ಹಾವುಗಳು ಮತ್ತು ಚಿಟ್ಟೆಗಳು. ಮನೆಯ ಒಳಗೆ ಕೂಡ ಹಲವಾರು ಬಾರಿ ಹಾವುಗಳು ನುಸುಳಿ ಬಂದದುಂಟು. ಹವಾಮಾನಗಳ ಸನ್ನಿವೇಶಗಳು ಮಲೆನಾಡಿನಲ್ಲಿ ಬೇರೆಯೇ ಅನುಭವಗಳನ್ನು ಸೃಷ್ಟಿಮಾಡುತ್ತಿದ್ದವು. ಮಲೆನಾಡಿನಲ್ಲಿ ಬೇಸಿಗೆ ಎಂಬುದು ಅಷ್ಟೊಂದು ವ್ಯತ್ಯಾಸ ತರುತ್ತಿರಲಿಲ್ಲ. ಮಧ್ಯಾಹ್ನದ ಸಮಯಕ್ಕೆ ಹೆಚ್ಚು ಬಿಸಿಲಿದ್ದರೂ ಸೆಕೆಯಾಗುವ ಸನ್ನಿವೇಶವೇ ಇರಲಿಲ್ಲ. ಸಂಜೆ ವೇಳೆಗೆ ತಂಪಾಗಿ, ಚಳಿಗಾಲದ ಹವಾಮಾನ ಬಂದುಬಿಡುತ್ತಿತ್ತು. ವಿದ್ಯುತ್ ಕಾಣದಿರುವ ನಾವು ಸೀಮೆಎಣ್ಣೆಯ ದೀಪದಿಂದಲೇ ನಮ್ಮ ಪ್ರತಿರಾತ್ರಿಯನ್ನು ಸಾಗುತಿದ್ದೆವು.

ಮಳೆಗಾಲವಂತು ಹೇಳುವುದೆ ಬೇಡ! ಮಳೆಯ ಆ ರಭಸವು ನಮ್ಮನ್ನು ಕುಳಿತ ಜಾಗದಿಂದ ಏಳದಂತೆ ಜಡವಿಡಿಸಿಬಿಡುತ್ತಿತ್ತು. ಒಂದುವೇಳೆ ಮನೆಯಿಂದ ಹೊರಗೆ ಹೋದರೆ, ಬರುವಾಗ ಕಾಲುಗಳನ್ನೊಮ್ಮೆ ಆಳವಾಗಿ ನೋಡಿಕೊಳ್ಳಬೇಕಾಗಿತ್ತು ಅಷ್ಟೊಂದು "ಜಿಗಣೆ"ಗಳ ಹಾವಳಿ. ಒಲೆಯ ಬದಿ ಚಳಿಕಾಯಿಸಲು ಕುಳಿತರೆ ಏಳುವ ಜಾಯಮಾನವೇ ಇಲ್ಲ. ಬೆಚ್ಚಗೆ ಕಾಫಿ ಕುಡಿದು ಹಲಸಿನ ಬೀಜವನ್ನು ಒಲೆಯಲ್ಲೆ ಸುಟ್ಟು ತಿನ್ನುವ ಮಜಾವೇ ಬೇರೆಯಾಗಿತ್ತು. ಇಂತಹ ಪ್ರಸಂಗಗಳು ಮಲೆನಾಡಿನಲ್ಲೇ ಅನುಭವಿಸಲು ಸಿಗುವುದು. ಮಳೆಗಾಲ ಮುಗಿದರೆ ಸಾಕು, ನಂತರ ಚಳಿಗಾಲದ ಹಾವಳಿ. ಎಷ್ಟು ಸ್ನಾನ ಮಾಡಿದರೂ, ನೀರಿನ ಅಂಡೆ ಕಾಲಿಯಾಗುವವರೆಗೆ ಸ್ನಾನ ಮಾಡಬೇಕೆನಿಸುತ್ತಿತ್ತು. ನಿಜವಾಗಿಯೂ ಹೇಳಬೇಕೆಂದರೆ, ಮಲೆನಾಡಿನಲ್ಲಿ ಮಳೆಗಾಲ ಮತ್ತು ಚಳಿಗಾಲಗಳೇ ಪೂರ್ತಿ ವರ್ಷ ನಡಿಯುತ್ತಿತ್ತು.

ಇವು ಈಗ ಬರಿ ನೆನಪುಗಳಾಗಿಯೇ ಉಳಿದಿರುವುದು ಮಾತ್ರ. ಈಗಿನ ಮುಂದುವರಿಕೆಯೋ, ತಂತ್ರಜ್ಞಾನದ ಬೆಳವಣಿಗೆಯೋ, ಇಲ್ಲವೆ ದುರಾಸೆಯೋ ಮಲೆನಾಡಿದಲ್ಲಿ ಮಲೆಗಳ ನಾಶವು ಹೆಚ್ಚಾಗಿದ್ದು ಪೂರ್ಣವಾಗಿ ಹವಾಮಾನದಲ್ಲಿ ಬದಲಾವಣೆಯನ್ನು ತಂದಿದೆ. ಹಿರಿಯರು ಅಂದಾಜಿಸುತಿದ್ದ ಹವಾಮಾನಗಳ ಅವಧಿ ಈಗ ಅಂದಾಜು ಮಾಡಲಾಗದಷ್ಟು ಆಳವಾಗಿ ಹೋಗಿಬಿಟ್ಟಿವೆ. ಯಾವಾಗ ಮಳೆ ಬರುವುದೋ, ಚಳಿಗಾಲ ಇರುವುದೇ, ಯಾವಾಗ ಶುರು ಅಥವಾ ಅಂತ್ಯವೆಂಬುದು ತಿಳಿಯದಂತಾಗಿದೆ. ಮಲೆಗಳಿಲ್ಲದೆ ಮುಂದೊಮ್ಮೆ ಮಲೆನಾಡು "ಮಲೆಗಳಿಲ್ಲದ ನಾಡು" ಆಗುವದು ಎಂಬ ಭಾಸವಾಗುತ್ತಿದೆ.

ಸರಿಸುಮಾರು ಐದಾರು ವರ್ಷಗಳ ಹಿಂದಿನಿಂದ (ಅಂದಾಜು ೨೦೦೨ - ೨೦೦೩) ಮಲೆನಾಡಿನ ಪ್ರತಿಯೊಂದು ಮನೆಯಲ್ಲಿಯೂ ಕೂಡ ಗಾಳಿಯಂತ್ರ (ಫ್ಯಾನ್)ಗಳ ಬಳಕೆ ಹೆಚ್ಚಾಗುತ್ತಿದೆ. ನಮ್ಮ ಮನೆಯ ಬಗ್ಗೆಯೇ  ಹೇಳಬೇಕೆಂದರೆ, ಬೇಸಿಗೆಗಾಲಕ್ಕೂ ಹೊದಿಕೆ ಹಾಕಿ ಮಲಗುತಿದ್ದವರು ಈಗ ಗಾಳಿಯಂತ್ರಗಳಿಲ್ಲದೆ ಮಲಗುವುದು ಕಷ್ಟವಾಗಿಬಿಟ್ಟಿದೆ. ಹಾಲು, ತರಕಾರಿಗಳು ಹಲವಾರು ದಿನಗಳವರೆಗೆ ಇಡಬಹುದಾದ ಊರಿನಲ್ಲೇ ಶೀತಲೀಕರಣ ಯಂತ್ರ(ಫ್ರಿಡ್ಜ್)ದ ಅವಶ್ಯಕತೆ ಬಂದುಬಿಟ್ಟಿದೆ. ತಾಪಮಾನ ಹೆಚ್ಚಿದೆ, ಮಳೆ ಸಮಯಕ್ಕೆ ಬರುತಿಲ್ಲ, ಚಳಿಗಾಲವಂತು ತಿಳಿಯುತ್ತಲೇ ಇಲ್ಲ.

ಮಾನವನೆಂಬುದು ಈ ಭೂಮಿಯ ಒಂದು ಜೀವಿಯಾದರೂ, ಭೂಮಿಯನ್ನೇ ನಾಶ ಮಾಡುವ ದುರ್ಗುಣ ನಮ್ಮಲ್ಲಿ ಮಾತ್ರ ಇರುವುದು. ಹೆಚ್ಚು ಬುದ್ದಿವಂತಿಕೆ ಸ್ವಯಂ ನಾಶಕ್ಕೆ ಕಾರಣವಾಗುವ ಮಾತು ಇಲ್ಲಿ ವಾಸ್ತವಕ್ಕೆ ಬರುತ್ತಿದೆ. ಇವೆಲ್ಲವು ಪ್ರಕೃತಿ ವಿಕೋಪಕ್ಕೆ ಕಾರಣವಾಗಿ ಮುಂದೊಮ್ಮೆ ಮನುಕುಲವೆಂಬುದೇ ಅಳಿಸಿಹೋಗುವುದಂತು ನಿಜ. ಈಗಲೂ ಸಮಯ ಮಿಂಚಿಲ್ಲ, ಪ್ರತಿಯೊಬ್ಬರು ಮರ ನೆಡುವ ಮೂಲಕ, ಪರಿಸರ ಮಾಲಿನ್ಯ ನಿಯಂತ್ರಣ ಮಾಡುವ ಮೂಲಕ ಮತ್ತೊಮ್ಮೆ ಈ ಭುವಿಯನ್ನು ಹಸಿರಾಗಿಸಬಹುದು. ಇದು ನನ್ನದೋ ಅಥವಾ ಬರಿ ನಿನ್ನದೋ ಭುವಿಯಲ್ಲ, ನಮ್ಮೆಲ್ಲರ ಭುವಿ. ಪ್ರತಿಯೊಬ್ಬರ ಖಾಳಜಿಯು ಇಲ್ಲಿ ಅತಿಅವಶ್ಯಕ.

1 ಕಾಮೆಂಟ್‌: