kavana ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
kavana ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಜುಲೈ 9, 2020

ಶುಕ್ರವಾರ, ಮೇ 29, 2020

"ನೆನೆಪುಗಳ ನಗು" - - ಕವನ 20

ನೆನೆಪುಗಳ ನಗು


ನೀಲಾ ಮನದ ಬಾನಲಿ
ಹೊಳೆದಿವೆ ಕನಸುಗಳ ಮಿನುಗು...
ಪಾದದೆಡೆಗೆ ಹರಿದಿದೆ ಅಲೆಯು
ಎದೆಯಲ್ಲಾಗಿದೆ ಸಂಭ್ರಮದ ಸೊಬಗು...
ಕನಸುಗಳ ಸಾಗರದ ಕೊರೆತಕೆ
ಮಿಡಿಯಲಿ ಮನದಲಿ "ತುಸುನಗು"...

ಬಾಲ್ಯ-ಭವಿಷ್ಯಗಳ ಸೆರೆಯಲಿ
ಕೆಲ ನೆನೆಪುಗಳಿವೆ ನನಗೂ...
ನೆನೆದವೆಲ್ಲಾ ಸಿಗದಿರುವುದು ಇಲ್ಲಿ
ಇನ್ನೇಕೆ ಬೇಕು ಆ ಕೊರಗು...
ಇರುವ ನೆನಪುಗಳನ್ನೇ ಉಳಿಸಿ
ಮೂಡಲಿ ಆನಂದದ "ಕಿರುನಗು"...

ಮರಳಿ ಬರಬಹುದೇ ಆಕ್ಷಣಗಳು
ನೆನಪುಗಳು ನೆನೆಯದು ಜಡಿಮಳೆಗೂ...
ನಗುವೊಂದು ಅದ್ಬುತ ಸೃಷ್ಟಿಯು
ಸಿಗಲಾರದು ಕಾರಣವು ಕೊನೆಗೂ...
ಬಾಳನೌಕೆಯಲಿ ಎಲ್ಲವ ಮರೆತು
ಬಲವಾಗಲಿ ಜೀವನದಲಿ "ಮುಗುಳುನಗು"...

ಬುಧವಾರ, ಏಪ್ರಿಲ್ 15, 2020

"ಎನ್ನ ಕೊನೆದಿನ" - - ಕವನ 19



ಕಳೆದಿರುವೆನು ಮೂರುದಶಕಗಳ ಯಾನ,
ಇಂದು ಎಂಬುವುದ ಮರೆಸಿದೆ ಎನ ಅಜ್ಞಾನ,
ಕೊರಗಿಹುದು ಕನಸುಗಳು ತುಂಬಿರುವ ಈ ಮನ...
ಏನು ಮಾಡುವುದು ಈಕ್ಷಣ? "ಇದು ಎನ್ನ ಕೊನೆದಿನ"...

ದೇಶ-ವಿದೇಶ ಸುತ್ತಬೇಕಿನಿಸಿತು ಆದಿನ,
ಕೋಶ-ಭಾಷೆಗಳ ಓದಬೇಕಿತ್ತು ಪ್ರತಿದಿನ,
ಹಣವ ಬಯಸಿ ಕಳೆದುಹೋಯಿತು ಏನ ಜೀವನ...
ಉಳಿದಿರುವುದೇ ಸಮಯವು ಇನ್ನು? "ಇದು ಎನ್ನ ಕೊನೆದಿನ"...

ಕಲಿಯಬೇಕೆಂದಿದ್ದೆನು ಹಾಡಲು ಸುಮಧುರ ಗಾನ,
ನೀಡಬೇಕೆಂದಿದ್ದೆನು ಬಡವರಿಗೆ ಬಹು-ದಾನ,
ಬರಿ ಇದ ನೆನೆದೇ ಕಳೆದೆನು, ಬೆಳೆಸಲಿಲ್ಲ ಈಗುಣ...
ಇನ್ನಿರುವುದೇ ನನಗೆ ಈ ಋಣ? "ಇದು ಎನ್ನ ಕೊನೆದಿನ"...

ಸಾಯುವ ಮೊದಲು ಮಾಡಬೇಕಿತ್ತು ಒಳ್ಳೇದನ್ನ,
ಇದ ಕೊರಗುವ ಮುನ್ನ ಮಾಡು ನೆನೆದ ಕ್ಷಣ,
ಮತ್ತೊಮ್ಮೆ ಮರುಗಳಿಸದು ಈ ಕಣ ಜೀವನ...
ಯಾರರಿವರು ನಾಳೆವೆಂಬುವ ಪಯಣ? "ಇದು ಎನ್ನ ಕೊನೆದಿನ"...

ಸೋಮವಾರ, ಮಾರ್ಚ್ 30, 2020

"ಸಂಚಾರಿಯಾಗುವೆ" - ಕವನ 18



ರೆಕ್ಕೆಯ ಹರಡಿ ಗಗನದಿ ತೇಲೋ
ಹಕ್ಕಿಯಾಗ ಬೇಕೆನಿಸಿದೆ ...
ಜಗವ ನೋಡುವಾಸೆ ಮೂಡಿದೆ
ಕಾದು ಕುಳಿತಿಹೆ ಸರಿಸಮಯಕೆ ...

ಯಂತ್ರನಾಗಿ ದುಡಿಯೋ ಶರೀರ
ವಿರಾಮವನ್ನೀಗ ಕೋರಿದೆ ...
ಖುಷಿಯೇ ಇರದೆ ದುಡಿಮೆ ತಂದ
ಜಿಗುಪ್ಸೆ ತೊರೆಯಬೇಕಿದೆ ...

ದುಡಿಮೆ ಏಕೆ? ಪಯಣ ಬೇಕೇ?
ಗೊಂದಲವೀಗ ಶುರುವಾಗಿದೆ ...
ಮಡಿವ ಮುನ್ನ ಭುವಿಯ ಬಣ್ಣ
ಕಾಣಬೇಕಿದೆ ಇದ ಮರೆಯದೆ ...

ಇರುವುದೊಂದೇ ಜನುಮ ನಮಗೆ
ಕಳೆಯಬೇಕೆ ಬದುಕ ಸುಮ್ಮನೆ ?
ಸಂಚಾರಿಯಾಗುವೆ ಧರೆಯ ಲೋಕದಿ
ಸವಿಯಬೇಕಿದೆ ಕೆಲ ಕ್ಷಣಗಳೆ...

ಗುರುವಾರ, ಫೆಬ್ರವರಿ 13, 2020

"ಕಡಲ ಅಲೆಗಳ ಜೊತೆಗೆ" - ಕವನ 17




ಸೂರ್ಯನು ಉಗುಳುತ್ತಿರುವ ಹಾಗೆ, ಮೂಡಿದೆ ಅಲೆಗಳ ಸಾಲೆ ...
ಮೂಡಿದನು ಮೂಡಣದ ರವಿಯು, ಕಡಲ ಅಡಿಯಿಂದ ಮೇಲೆ...
ಮೋಡಗಳು ಮರೆಮಾಡ ಹೊರಟಿವೆ, ಅವನ ದುಂಡಾಕಾರದ ನಗೆ...
ಕೆಂಪಾಗಿ ಕಂಡಿದೆ ಬಾನು, ಈ ಮುಂಜಾನೆಯಾ ಸವಿಗಂಪಿಗೆ...

ಹೆಜ್ಜೆಗಳ ಮಾದರಿ ಕೇಳಿದೆ, ನಿರಂತರ ಅಲೆಗಳ ಕೊರೆತ...
ಏಡಿಗಳು ಉರುಳಿವೆ ಸಾಗರಕೆ, ಅಲೆಗಳ ಹಿಂದೆ ಆಲಿಸುತ...
ಮೀನುಗಳು ಮರೆಯಾಗಿದೆ ಬೆದರಿ, ಕಾಗೆಯು ಅವುಗಳ ಹೊಂಚಿಸುತ...
ಮೈಮರೆತರು ಕಂಡು ನೋಡಿಗರು, ಈ ವಿಸ್ಮಯವ ಸವಿಯುತ...

ಹಕ್ಕಿಗಳು ಹಾರಿವೆ ಎತ್ತರದಿ, ಅವನ ಕಾಣುವ ತವಕಕೆ..
ದೋಣಿಗಳು ದೂರದಿ ಸಾಗಿದೆ, ಕಡಲಿನ ಅಂಚಿನ ಕಡೆಗೆ...
ಹೃದಯವು ಕಂಡು ಹಗುರವಾಗಿದೆ, ಕಡಲ ರಮಣೀಯ ದೃಶ್ಯಕೆ...
ಸಾಲದು ವರ್ಣಿಸಲು ಪದಗಳೇ, ಈ ಯಕ್ಷಸೃಷ್ಟಿಯ ಬೆರಗಿಗೆ...

ಶುಕ್ರವಾರ, ಜುಲೈ 19, 2019

"ಭಿಕಾರಿ ಬದುಕು" - ಕವನ 16




ಮುಂಜಾನೆಯ ಆ ತಾಜಾ ಮಜಾ
ಇಲ್ಲವಾಗಿದೆ ...
ಹೊಸದಿನವೆಂಬ ಖುಷಿಯೂ  ಇಂದು
ಕಮ್ಮಿಯಾಗಿದೆ ...
ಸೂರ್ಯಚಂದ್ರರ ಬರುವು ತಿಳಿಯದೆ
ಮರೆತೇಹೋಗಿದೆ ...
ಏನಿದು ಈ ಬದುಕು, ಈ ತರ
ಭಿಕಾರಿಯಾಗಿದೆ ....

ಏನೇ ಆಗಲಿ, ಊರೇ ಬೀಳಲಿ ಎಂಬ
ಭಾವನೆ ಬೆಳೆದಿದೆ ...
ತವಕವೆ ಇಲ್ಲದ ಈ ಹೃದಯ
ಮೆಲ್ಲಚಲಿಸಿದೆ ... 
ತಾರುಣ್ಯ ಮರೆತ ದೇಹವು
ಸೊರಗಿಹೋಗಿದೆ ...
ಏನಿದು ಈ ಬದುಕು, ಈ ತರ
ಭಿಕಾರಿಯಾಗಿದೆ ....

ಏನೋ ತಿಳಿದುಕೊಳ್ಳುವ ಆಸೆ
ಈಗಮಾಸಿದೆ ...
ಮಾಸದ ಸಂಬಳ ಸರಿಸಮಯಕ್ಕೆ
ಬಂದುಸೇರಿದೆ ...
ಎಲ್ಲಾ ಇದ್ದೂ, ಏನೋ ಇಲ್ಲವೆಂಬ
ಕೊರಗುಮೂಡಿದೆ ...
ಏನಿದು ಈ ಬದುಕು, ಈ ತರ
ಭಿಕಾರಿಯಾಗಿದೆ ....


ಗುರುವಾರ, ಮೇ 9, 2019

"ನಡುರಾತ್ರಿಯ ಹಾದಿಯಲಿ" - ಕವನ 15


ನಡುರಾತ್ರಿಯ ಹಾದಿಯಲಿ
ನಡೆಯುತ್ತಿರುವೆನು ನಾನೊಬ್ಬನೇ ...
ಬೀದಿದೀಪಗಳು ತಲೆಬಾಗಿ
ನೋಡುತ್ತಿವೆ ನನ್ನನೇ ...
ಧರೆಯ ಬೆಡಗಿಗೆ ಚಂದ್ರನು
ನಾಚಿ ಮರೆಯಾದ ಬೇಗನೇ...
ಆಹಾ! ರಾತ್ರಿಯ ಈ ಸೊಗಸನು
ಸವಿಯದವ ಇದ ಬಲ್ಲನೇ ...


ನಡುರಾತ್ರಿಯ ಹಾದಿಯಲಿ
ಏಕಾಂಗಿಯಾದೆನು ನನ್ನೊಳಗೆ...
ಜೊತೆಗಿರಬೇಕಿತ್ತು ಒಂದು ಸಖಿ  
ಇದನೆನೆದು ಮೂಡಿತು ಮುಗುಳುನಗೆ...
ನಾಯಿಗಳು ಬೊಗಳದೆಯೇ
ಗುರುಗುಟ್ಟುತ್ತಿವೆ ಸುಮ್ಮಗೆ ...
ನಡೆದು ಆಯಾಸವೆನಿಸಿದರೂ
ಸಾಗುತ್ತಿರುವೆನು ಮೆಲ್ಲಗೆ...

ನಡುರಾತ್ರಿಯ ಹಾದಿಯಲಿ
ಸುಳಿಯುತಿಹುದು ಗುರಿಯೋಚನೆ...
ಮನುಷ್ಯನಿರದ ಈವೇಳೆಗೆ  
ಶಾಂತತಾಳಿದೆ ಏನ ಭಾವನೆ ...
ಬೀಸೋ ಗಾಳಿಗೆ ಸಿಲುಕಿ
ಧೂಳುಕಣಗಳ ಚಲನೆ...
ಬಹುದೂರ ಬಾಕಿ ಇರುವುದೂ
ತಲುಪಲೂ ನಮ್ಮನೆ...


"ಮಹಾಗುರು" - ಕವನ 14




ಒಳ್ಳೆತನವ ಕಲಿಸಯ್ಯಾ ಗುರುವೇ
ನೀನಾಗುವೆ ಜಗದ ಮಹಾಗುರು
ಶಿಷ್ಯನಿಗಿಂತಲೂ ನೀನಿರುವೆನು ಎತ್ತರ ಬಹುಪಾಲು ...

ಕಳ್ಳತನವೆಂಬುದನ್ನ ಕಳಿಸಿದರಯ್ಯ
ಮರುಗುವೆಯೋ ಇದನ್ನರಿತು ಮುಂದು
ಶಿಷ್ಯನಾಗುವನು ನಿನ್ನ ಮೀರಿಸುವ ಮಹಾಕಳ್ಳ ನು ...

ಲೋಕನಿಯಮವ ಯಾರರಿವರಯ್ಯ
ಒಳ್ಳೆತನವೆಂಬುದು ಬೆಳೆಸುವುದು ಎತ್ತರದಿ
ಕಳ್ಳತನವು ಅಳಿಯುದು ಈ ಜಗದಿ ...

ಗುರುವಾರ, ಫೆಬ್ರವರಿ 21, 2019

"ಇರುವುದೊಂದೇ ಈ ಜೀವನವು" - ಕವನ 13




ಜಲಪಾತದ ನೀರಿನ ರಭಸದಂತೇ
ಉರುಳಿ ಹೋಗುತಿದೆ ಎನದಿನಗಳು ...
ಮನದಾಸೆಗಳೆಲ್ಲವೂ ತೀರದೆಯೇ
ಜೀವನದಂತ್ಯದ ಸಾಗರ ಸೇರುತಿಹುದು ...

ಮುಂದೆ ಸಾಗುತ್ತಿಲ್ಲ, ಹಿಂದೆ ಬರುವಂತಿಲ್ಲ
ನಡುವಲಿ ನಿಂತಿದೆ ಜೀವನ ನೌಕೆಯೂ ...
ಕನಸ ಕಂಡೇ ಉಳಿದಿರುವೆನು
ದಡ ಸೇರೋ ಗುರಿಯನು ಮರೆತು ...

ಮರೆತೇ ಕಳೆದರೂ, ಬದುಕಿ ಉಳಿದರೂ
ಕಾಲವು ಯಾರನು ಕಾಯದು ...
ಇಂದೇ ಎಂಬುವ ನಂಬಿಕೆ ಹಿಡಿಯದೇ 
ಪಯಣವು ಮುಂದೇ ಸಾಗದು ...

ಇರುವುದೊಂದೇ ಈ ಜೀವನವು
ಬರಲೀ ಸಾಧಿಸುವಂಥಹ ಮನಛಲವು...
ಉಳಿದಿರುವುದು ಕೆಲಕ್ಷಣಗಳೂ
ಸಾರ್ಥಕವಾಗುವಂತಾಗಲಿ ಈ ಜನುಮವು... 


ಶನಿವಾರ, ಜೂನ್ 23, 2018

ಮಳೆ "ಕಾಲ - ಚಕ್ರ" - ಕವನ 12


ಓ ಸುಡುವ ಸೂರ್ಯನೇ
ನಿನಗೇಕೆ ಕೋಪವೇ ...
ಬಿಸಿಲ ಬೇಗೆ ನೆಲಕೆ ಬಡಿದು
 ಭೂತಾಯಿಯು ನರಳಿದೆ ...

ಓ ಮರಗಿಡ ಬೆಟ್ಟವೇ
ಸುಮ್ಮನೇಕೆ ನಿಂತಿರುವೇ ...
ನೀವು ತಡೆಯದ ತಂಗಾಳಿ
ಊರಬಿಟ್ಟು ಮರೆಯಾಗಿದೆ ...


ಓ ಅಲೆಮಾರಿ ಗಾಳಿಯೇ
ಎನ ವಿಳಾಸವ ಮರೆತೆಯೇ ...
ಕರೆದುಕೊಂಡು ಬಾರೊ ಒಮ್ಮೆ
ಬಿಳಿಮೋಡಗಳ ಹಿಂಡನೇ ...

ಓ ಬೆಳ್ಳಿ ಮೋಡವೇ
ಭೂತಾಯಿಯು ಬೇಡವೆ ...
ಬಿಸಿಲಬೇನೆಗೆ  ನರಳೋ ನೋಡಿ
ಕಣ್ ಮಳೆಹನಿಗಳ ಸುರಿಸಿರೆ ...

ಓ ಮಳೆಹನಿಗಳ ಮಾಲೆಯೇ
ನನ್ನ ದೂರ ತಿಳಿಯದೆ ...
ನಿನ್ನ ಬೆರೆತು ಈ ನೆಲವು
ಹಸಿರು ಹಸಿರಾ ಪಸರಿಸೆ ...

ಯಾವುದೊ ಈ ಮಾಯೆಯೋ
ಬಿಸಿಲು ಮಳೆಯ ಜಾಲವೋ ...
ಮಳೆ "ಕಾಲ - ಚಕ್ರ"ದೊಳಗೆ
ಉಕ್ಕಿ ಹರಿಯಲಿ ಏನ ಭಾವನೇ ..

ಗುರುವಾರ, ಮಾರ್ಚ್ 15, 2018

“ಸೋಮಾರಿ ಗಾನ” - ಕವನ 11



ಹೊತ್ತು ಕಳೆದರೇನಂತೇ 
ಜೊತೆಗೆ ಬರುವನು ಅವನು ..
ಸುತ್ತ ಇರುವವರ ತಿಳಿಯದೆ
ಎನಬೆನ್ನ ಬಿಡನು ಇವನು ..

ರವಿ ಬಂದರೇನಂತೇ
ಅವನಿಲ್ಲವೇ ನನಗಿಂದು ..
ಹೊತ್ತು ಕಳೆದರೂ ಹೋಗಲಿ
ಹೊಟ್ಟೆಗಿಟ್ಟು ಕೂಡ ಮರೆವೆನು ..

ಸ್ವಚ್ಛವಿಲ್ಲ ಎಂದರೇನಂತೇ
ಬೆಚ್ಚ ಮಲಗ ಬೇಕಿನ್ನು ..
ಎದ್ದು ಹೊರಡಬೇಕೆಂದರೆ
ಮುಗ್ಗರಿಸಿ ಬೀಳುವೆ ನಿನಬಲೆಗೆಂದು ..

ಅರ್ಧ ದಿನವು ನಿನದಾದರೇನಂತೇ
ನಾನಲ್ಲವೆ ನಿನ ಗುಲಾಮನು ..
ಯಾವ ಕೆಲಸವನೇಕೆ ಮಾಡಲಿ 
"ಸೋಮಾರಿ" ಎಂದೇಳುವೆ ನಿನ್ನ ಹೆಸರನು ..

ಭಾನುವಾರ, ಫೆಬ್ರವರಿ 18, 2018

“ಗಾಳಿ ಮಾತು” - ಕವನ 10





ಕಣ್ಣ ಸಿಲುಕದ ಗಾಳಿಯೊಂದು
ನುಸುಳಿ ಮನೆಗೆ ಬಂದಿದೆ..
ದಾರಿ ಮರೆತು ಬಂದಂತಿದೆ
ತರಗೆಲೆಗಳು ಅದರ ಜೊತೆಗೆಯೇ..

ಬಟ್ಟೆ ಬರೆಯು ಪುಟಗಳೆಲ್ಲ
ಹೆದರಿಕೊಂಡು ಓಡಿವೆ..
ಇದರ ಸ್ವಾಗತ ಬಯಸಿಕೊಂಡು
ಮರಗಿಡಗಳು ಬಾಗಿವೆ..

ಹಕ್ಕಿ ಹುಳುಗಳು ನಿನ್ನ ಬಗೆಯೆ
ಚೀರಿಕೊಂಡು ಸುತ್ತಿವೆ..
ನಿನ್ನ ತಂಪು ಮಾಡಲೆಂದೆ
ಮಳೆಹನಿಗಳು ಉದಿರಿವೆ..

ನಿನ್ನ ದಯೆಯೊ ನಿನ್ನ ಮಾಯೆಯೊ
ನನಗೊಂದೂ ತಿಳಿಯದು..
ನಿನ್ನ ನಂಬಿಕೊಂಡ ಜಗವು
ಬದುಕುವುದನ್ನ ಕಲಿತಿದೆ..

ಮಂಗಳವಾರ, ಮೇ 23, 2017

7ರ ಮಗ್ಗಿಯಲ್ಲಿ ಜೀವನ ಚಕ್ರದ ಗಮ್ಮತ್ತು - ಟಾಂಗ್-ಕಿಂಗ್ (ಲೇಖನ) 1

7ರ ಮಗ್ಗಿಯಲ್ಲಿ ಜೀವನ ಚಕ್ರದ ಗಮ್ಮತ್ತು*


7 x 1 = 7 ಬಾಲ್ಯ ಪ್ರವೇಶ
7 x 2 = 14  ಯೌವ್ವನ ಪ್ರವೇಶ
7 x 3 = 21  ಪ್ರೀತಿ, ಪ್ರೇಮ, ಪ್ರಣಯ
7 x 4 = 28  ವಿವಾಹ, ಸ೦ತಾನ ಪ್ರಾಪ್ತಿ
7 x 5 = 35  ಸಂಸಾರ ಸಾಗರದಲ್ಲಿ ಈಜು ಸ್ಪರ್ದೆ
7 x 6 = 42  ಮಕ್ಕಳ ಯೌವ್ವನ ಪ್ರವೇಷ
7 x 7 = 49  ಸಂಸಾರದಲ್ಲಿ ರಾಜಕೀಯ, ನಾನು ನನ್ನ ಮನೆಯಲ್ಲಿ ಪರಕೀಯ
7 x 8 = 56  ನಿವೃತ್ತಿ, ಮಾವ ಅಥವಾ ಅಳಿಯ ಆಗುವ ಯೋ (ರೋ) ಗ
7 x 9 = 63  ಅರವತ್ತಕ್ಕೆ ಅರಳು ಮರಳು, ಷಷ್ಟಿ ಪೂರ್ತಿ
7 x 10 = 70 ವಿದಾಯ.!!!
ಸೋ .....ಇರೋ ತನಕ ಜಾಲಿ .ಆಮೇಲೆ ಖಾಲಿ ಊರಿಗೋಂದ್ ಊಟ...ಗೋಡೆಗೊಂದ್.... ಫೋಟೋ. ಅಸ್ಟೆ ಜೀವನ..... 

ಬುಧವಾರ, ಫೆಬ್ರವರಿ 22, 2017

“ಹೊಸ ಅನುಭವ” - ಕವನ 8



ಮುಂಜಾನೆಯು ಹೊಸತಾದಂತಿದೆ..
ಸೂರ್ಯಕಿರಣವು ತಿಳಿಯಾಗಿದೆ..
ತಂಗಾಳಿಯ ರಭಸಕೆ ತಾಕಿದ ದೇಹವು
ಮೆಲ್ಲನೆ ರೋಮಾಂಚನಗೊಂಡಿದೆ….

ಎಲೆಗಳು ಕುಣಿದಂತಿದೆ..
ಹಕ್ಕಿಗಳು ಖುಷಿಯಾಗಿದೆ..
ಕನಸ ಕಾಣುವ ಕಣ್ಣಿಗೆ ಎಲ್ಲವು
ಇಂದು ಸೊಗಸಾಗಿ ಕಂಡಿದೆ….

ಸಮಯ ಬದಲಾದಂತಿದೆ..
ದಿನವೂ ಹಸಿರಾಗಿದೆ..
ಇವುಗಳ ನಡುವಿನ ನನ್ನ ಜೀವನ
ಹೊಸ ಅನುಭವವ ಪಡೆದಿದೆ….

ಗುರುವಾರ, ಡಿಸೆಂಬರ್ 22, 2016

“ನೋಡಬನ್ನಿ ನಮ್ಮೂರ” - ಕವನ 7




ಮುಂಜಾನೆಯ ಹಕ್ಕಿಗಳ ಚಿಲಿಪಿಲಿ ಕಲರವ
ಇದ ನೋಡಬಯಸಿದ ಆ ಬಾನ ಸೂರ್ಯ…
ಎಲ್ಲೆಲ್ಲೂ ತುಂಬಿರುವುದು ಉದುರುವ ಮಂಜಿನಸರ
ಇದರ ಸೆರೆಯಲಿ ಬಾರದೆ ರವಿಕಿರಣವು ಮಾಯ…

ಕೋಳಿಯ ಕೂಗಿಗೆ ಶುರುವಾಗುವುದು ನನ್ನ ಪ್ರತಿದಿನ
ಎನಮೇಲೆ ಮಲಗಿರುವುದು ಬೆಕ್ಕು, ಮುದುರಿಕೊಂಡು ಬಾಲವನ್ನ…
ಬಾಗಿಲ ತೆಗೆದರೆ ಕಂಡಿತು ಮಂಜಲಿ ಕೂಡಿದ ಸ್ವರ್ಗಬನ
ಆಹಾ! ಎಂತಹ ಜನುಮ ನನ್ನದು, ಮರೆತೆನು ಆಕ್ಷಣ…

ಕರುವು ಆಡುವುದು ಕೊಟ್ಟಿಗೆಯಲಿ ಹಸುವ ಸುತ್ತಿಬಂದು
ಇದನೋಡಿ ನಾಯಿಯು ಬಾಲವಾಡಿಸಿತು ಬೊಗಳಿಕೊಂಡು…
ತಣ್ಣನೆ ಗಾಳಿಚಲನೆಗೆ ಮರಗಿಡಗಳು ನಡುಗಿತು ಚಳಿಗೆಂದು
ದೋಸೆಯ ಮಾಡುತ್ತಿರುವಳು ನನ್ನಮ್ಮ, ಆಕಾಶವಾಣಿಯ ಕೇಳಿಕೊಂಡು…

ಸಿಗದಿನ್ನೊಂದು ಜನ್ಮ, ನೋಡಬನ್ನಿ ನಮ್ಮೂರ
ಮಲೆನಾಡ ಹಸಿರಸಿರಿಯಲಿ ಬೇಸರವೆಂಬುದು ತುಂಬಾದೂರ…
ಕಾಫಿ-ಚಹಾ ಮೆಣಸು, ಮರ ಗಿಡಗಳ ಸರದಾರ
ಕವಿಯ ಮಾಡಿತು ಎನ್ನ, ಇದ ನೆನೆದರೆ ಸಡಗರ…

ಭಾನುವಾರ, ನವೆಂಬರ್ 20, 2016

"ನಾ ಬರುವ ಆ ಸಂಜೆ…" - ಕವನ 6



ನಾ ಬರುವ ಆ ಸಂಜೆ…
ಬಾನಲಿ ರವಿಯು ಕೆಂಪಾಗಿರುವುದ ನಾಕಂಡೆ.
ಆ ಸೊಗಸ ನೋಡಬಂತು ಹಕ್ಕಿಗಳ ಹಿಂಡೆ.
ರಸಿಕನಾದೆನು ನಾನಿನಗೆ ಆ ದಿನದಂದೆ….

ನಾ ಬರುವ ಆ ಸಂಜೆ…
ಮಕ್ಕಳೆಲ್ಲ ಆಡುತ್ತಿರುವರು ಎಲ್ಲವ ಮರೆತಂತೆ.
ಬದಿಯಲ್ಲಿರುವ ಶ್ವಾನವು ಕುಳಿತಿರುವುದು ಅವರ ನೋಡಿ ನಗುವಂತೆ.
ಖುಷಿಯೆಂಬುದು ಒಂದೇ ಈ ನಿನ್ನ ಸೃಷ್ಟಿಯ ಮುಂದೆ….

ನಾ ಬರುವ ಆ ಸಂಜೆ…
ಕರುವೊಂದು ಓಡಿಬಂತು ಹಸಿವಾದಂತೆ.
ಕೊರಳಗಂಟೆಯ ಸದ್ದಿಗೆ ಹಸುವು ಕರೆಯಿತದವ “ಅಂಬೇ”.
ಎಲ್ಲವೂ ನಿನ್ನ ಒಲವಯ್ಯ, ಮರಳಾದೆನು ನಿನಗೆಂದೆ….

ನಾ ಬರುವ ಆ ಸಂಜೆ….
ನಾನೆನೆಯುವೆ ಎಲ್ಲವ ಪಡೆದಂತೆ.
ಪಕೃತಿಯೇ ಈ ನಿನ್ನ ಮಾಯೆಯ ನೋಡಿ ನಾಸೋತೆ.
ನಿನ್ನ ನೋಡಿದ ಈ ಜನುಮ ಸಾರ್ಥಕವಾದಂತೆ…

ಶುಕ್ರವಾರ, ಅಕ್ಟೋಬರ್ 21, 2016

" ಕನಸಲಿ ಕಳೆದಿರುವೆ.." - ಕವನ 5




ನಿದಿರೆಯೇ ಬಾರದ ಈ ಕಣ್ಣಲಿ
ಕನಸೊಂದ ನಾ ಕಂಡಿರುವೆ…

ಕನಸ ಕಂಡ ಮರುಕ್ಷಣವೇ
ಅದರೊಳಗೆ ನಾ ಕಳೆದಿರುವೆ…

ಕನಸೇ ನೀ ಛಲವ ಬಿಡದೆ
ನಾ ಎಲ್ಲವ ತೊರೆದಿರುವೆ…

ಕನಸ ಲೋಕವ ನನಸ ಮಾಡಲು
ನಾ ನನ್ನೆ ಕಾಡಿರುವೆ…

ಬದುಕೆಂಬ ಈ ಪಯಣದ ಬೆರಗಿಗೆ
ನಾ ಎಲ್ಲವ ಮರೆತಿವೆ..

ಗುರುವಾರ, ಅಕ್ಟೋಬರ್ 6, 2016

“ಬಡವನಾಗಿಯೇ ಉಳಿಯುವೆ” - ಕವನ 4



ಜೀವನವನೊಮ್ಮೆ ಸಾಗಿಸು ಎಲ್ಲವ ಅನುಸರಿಸಿ
ಹೊಟ್ಟೆ ಪಾಡಿಗಾಗಿ ಕಣ ಬೆವರನ್ನ ಸುರಿಸಿ
ಕಷ್ಟವೆಂಬುದ ವರವೆಂದು ಅನುದಿನವು ಭಾವಿಸಿ
ಹಿಡಿಯೆನು ಅಡ್ಡದಾರಿಯ ಸಿರಿವಂತಿಕೆಯ ಬಯಸಿ
“ಬಡವನಾಗಿಯೇ ಉಳಿಯುವೆ” ನಿಮಗೆಲ್ಲ ತಲೆಬಾಗಿಸಿ…


ಮಳೆಗಾಲಕ್ಕೆ ಸೋರುವ ಈ ಮನೆಯು
ಮಾಡದು ದುರ್ಬಲ ಎನ್ನ ಮನವ..
ಚಳಿಗಾಲಕ್ಕೆ ಸಿಗದ ಆ ಬರೆಬಟ್ಟೆಯು
ಮರೆಸದು ಎನ್ನ ನಂಬಿಕೆಯೆಂಬ ಕಿರಣವ..
“ಬಡವನಾಗಿಯೇ ಉಳಿಯುವೆ” ಇದನ್ನೆಲ್ಲ ಸಹಿಸಿ…


ಹೊಸನಂಬಿಕೆಯೊಂದು ಬೇಕು ಬಡಪಾಯಿ ಜೀವನಕೆ
ಪ್ರತಿದಿನವೆಂಬ ಹೊಸಹರುಷವು ಸಾಕೆನ್ನ ಉಳಿವಿಗೆ..
ದೊರೆಯಾಗೆನು ನಾನು, ಈ ನೆಮ್ಮದಿಯ ಅಳಿಸಿ
ಸಾಯುವವರೆಗೆ ದುಡಿಯುವೆ ಈ ದೇಹವ ಸವೆಸಿ
“ಬಡವನಾಗಿಯೇ ಉಳಿಯುವೆ” ಎಲ್ಲವನ್ನ ತ್ಯಜಿಸಿ…

ಮಂಗಳವಾರ, ಅಕ್ಟೋಬರ್ 4, 2016

“ಮಳೆಗಾಲದ ಸಂಭ್ರಮ” - ಕವನ 3




ಗುಡುಗು-ಸಿಡಿಲುಗಳ ಸದ್ದ ಕೇಳಲು
ಆಯಿತು ಮನದಲ್ಲೊಂದ ಕಂಪನ…
ಆ ಮಿಂಚಿನ ರಭಸದ ಹೊಡೆತಕೆ
ಈ ಧರೆಯೇ ನಿನಗಾಗಿ ತಲ್ಲಣ…

ಸೂರ್ಯನು ಹೆದರಿ ಮರೆಯಾದನು
ಕಾರ್ಮೋಡವಲ್ಲವೇ ಇದಕ್ಕೆ ಕಾರಣ…
ಬೀಸೋ ಗಾಳಿಯು ಸುತ್ತಾಡಲು
ತಗರೆಲೆಗಳು ಸಿಲುಕಿ ಮರಣ…

ಮಳೆಹನಿಗಳು ಮುತ್ತಿಡಲು ಈ ನೆಲವನ
ಹಸಿಹಸಿರಾಗಿ ಕೂಡಿತು ತನುಮನವು…
ನಿನ್ನ ಬಣ್ಣಿಸಲಾಗದೆ ಈ ಕವನ
ಬರೆಯುತ ಮರೆತೆನು ಪ್ರತಿಕ್ಷಣವು…

ಗುರುವಾರ, ಸೆಪ್ಟೆಂಬರ್ 22, 2016

"ಓ ಬಾಲ್ಯವೇ.." : ಕವನ 2


ಮಣ್ಣಿನಲಿ ಮನೆಯ ಮಾಡಿ
ಮಳೆಯಲಿ ಕುಣಿದಿರುವೆ....
ಹಣವೆಂಬುವ ಮರವನೇರಿ
ನೆಲವನ್ನ ಮರೆತಿರುವೆ....

ಓ ಬಾಲ್ಯವೇ.. ನಾ ನಿನ್ನ ಕಳೆದಿರುವೆ..

ಮರದ ಚಕ್ರದ ಗಾಡಿಯ ಮಾಡಿ
ಜಗವನ್ನೇ ಪಯಣಿಸಿರುವೆ....
ಅಹಂಕಾರವೆಂಬ ಶಿಖರವೇರಿ
ನನ್ನದೆಂಬುವನು ಕೊಂದಿರುವೆ....

ಓ ಬಾಲ್ಯವೇ.. ನಾ ನಿನ್ನ ತೊರೆದಿರುವೆ..

ಹಾರುವ ಗಾಳಿಪಟವ ಹಿಡಿದು
ಗಗನವನ್ನೇ ಚುಂಬಿಸಿರುವೆ....
ಗುರಿಯ ತಲುಪುವ ದುರಾಸೆಯಿಂದ
ಸ್ವಾರ್ಥದ ಕಡಲಲಿ ಬೆರೆತಿರುವೆ....

 ಓ ಬಾಲ್ಯವೇ.. ನಾ ನಿನ್ನ ಮರೆತಿರುವೆ..