ಬುಧವಾರ, ಫೆಬ್ರವರಿ 22, 2017

“ಹೊಸ ಅನುಭವ” - ಕವನ 8



ಮುಂಜಾನೆಯು ಹೊಸತಾದಂತಿದೆ..
ಸೂರ್ಯಕಿರಣವು ತಿಳಿಯಾಗಿದೆ..
ತಂಗಾಳಿಯ ರಭಸಕೆ ತಾಕಿದ ದೇಹವು
ಮೆಲ್ಲನೆ ರೋಮಾಂಚನಗೊಂಡಿದೆ….

ಎಲೆಗಳು ಕುಣಿದಂತಿದೆ..
ಹಕ್ಕಿಗಳು ಖುಷಿಯಾಗಿದೆ..
ಕನಸ ಕಾಣುವ ಕಣ್ಣಿಗೆ ಎಲ್ಲವು
ಇಂದು ಸೊಗಸಾಗಿ ಕಂಡಿದೆ….

ಸಮಯ ಬದಲಾದಂತಿದೆ..
ದಿನವೂ ಹಸಿರಾಗಿದೆ..
ಇವುಗಳ ನಡುವಿನ ನನ್ನ ಜೀವನ
ಹೊಸ ಅನುಭವವ ಪಡೆದಿದೆ….

ಶುಕ್ರವಾರ, ಜನವರಿ 27, 2017

“ಕನಸಿನ ಲೋಕದಲಿ” – ನಿಖರ ಮಾತು 2



ಕನಸ್ಸು, ಇದೊಂದು ವಿಚಿತ್ರ ಹಾಗು ಸೋಜಿಗವಾದ ಪ್ರಕ್ರಿಯೆ, ಎಲ್ಲಾ ಮನುಷ್ಯರೂ ಹಾಗು ಜೀವಿಗಳಲ್ಲೂ ಕಾಣಬಹುದಂತಹ ವಿಶೇಷ ಶಕ್ತಿ ಎಂದೆನಬಹುದು. ಕನಸೆಂಬ ಪದಕ್ಕೆ ಅರ್ಥವನ್ನು ಹುಡುಕುತ್ತಾ ಹೋದರೆ ಹಲವಾರು ಕಲ್ಪನೆಗಳು ಮನಸ್ಸಿಗೆ ಮೂಡುತ್ತದೆ. ರಾತ್ರಿ ಮಲಗಿದರೆ ನಿದಿರೆಯಲಿ ಕನಸ್ಸು, ಬೆಳಿಗ್ಗೆ ಎದ್ದರೆ ಹಗಲುಗನಸು, ಭವಿಷ್ಯದ ಬಗ್ಗೆಯ ಹಲವಾರು ಕನಸುಗಳು ಹೀಗೆ ಇದೊಂದು ಕೊನೆಯಿಲ್ಲದ ಹಾಗು ಜೀವನದಲ್ಲಿ ಹೆಚ್ಚುಕಾಲ ಕಳೆಯುವಂತಹ ಲೋಕ, “ಕನಸಿನ ಲೋಕ”.

ಕನಸಲಿ ಇಲ್ಲದನ್ನು ಪಡೆಯಬಹುದು, ಆಗದನ್ನೂ ಸಾಧಿಸಬಹುದು, ಆದರೆ ಇದು ಕಾಲ್ಪನಿಕವಷ್ಟೆ. ಈ ರೀತಿ ಕನಸುಗಳನ್ನು ಕಾಣುತ್ತಿರುವ ನಾವು ನಿಜವಾಗಿ ಎಚ್ಚರವಿರುವುದೇ ಕೆಲವು ಕ್ಷಣಗಳು ಮಾತ್ರ. ಎಷ್ಟೇ ಪ್ರಯತ್ನಪಟ್ಟು ವರ್ತಮಾನಕಾಲಕ್ಕೆ ಬಂದರೂ ಕೆಲಕ್ಷಣದಲ್ಲೇ ನಮ್ಮದೆ ಆದಂತಹ ಕಾಲ್ಪನಿಕ ಲೋಕಕ್ಕೆ ಹೋಗಿಬಿಡುತ್ತೇವೆ. ಇದೊಂತರಹದ ಕನಸ್ಸಾದರೆ ಜೀವನದಲ್ಲಿ ಸಾಧಿಸುವ, ಗುರಿ ತಲುಪುವ ಕನಸ್ಸು ಇನ್ನೊಂದು.

ಸಾಧಿಸಬೇಕು ಎಂಬ ಕನಸ್ಸು ಅದು ನಮ್ಮ ಗುರಿಯನ್ನು ತೋರಿಸುತ್ತದೆ. ಕನಸ್ಸೆಂಬುದು ಮುನ್ನುಡಿಯಷ್ಟೇ, ಆದರೆ ಇಡೀ ಜೀವನವೆಂಬ ಪುಸ್ತಕವನ್ನು ನಾವೇ ಬರೆಯುವ ಪ್ರಯತ್ನ ಮಾಡಬೇಕು. ಆಗ ಮಾತ್ರ ಕನಸ್ಸೆಂಬುದನ್ನು ನನಸ್ಸಾಗುವ ದಾರಿಯಲಿ ಸಾಗಿಸಬಹುದು. ಆದರೆ ನಾವು ಮುನ್ನುಡಿ ಬರೆಯುತ್ತಾ ಪುಸ್ತಕ ಖಾಲಿ ಉಳಿಸಿದರೆ ಕನಸ್ಸಿಗೆ ಬೆಲೆಯಾದರು ಎಲ್ಲಿರುವುದು. ಕನಸಿನ ಜೊತೆ ಪ್ರಯತ್ನವು ಹಾಗು ಜೀವನವೆಂಬ ಪುಸ್ತಕವನ್ನು ಬರೆಯುವ ಸಾಹಸವ ಮಾಡುವುದು ಮುಖ್ಯ.ಇವೆರಡರ ಹೊರತು ಕನಸ್ಸು ಕನಸ್ಸಾಗಿಯೆ ಉಳಿದಿರುವುದು. ಇಲ್ಲವಾದಲ್ಲಿ ಬದುಕಿನ ಕೊನೆಯ ಪುಟ ಬಂದಾಗಲು ಇಡೀ ಪುಸ್ತಕವು ಖಾಲಿಯಾಗಿಯೇ ಉಳಿದಿರುತ್ತದೆ. ಆದರೆ ನಮ್ಮಂತಹ ಯುವಜನತೆಯಲ್ಲಿ “ಪ್ರಯತ್ನ” ಹಾಗೂ “ಸಾಹಸ”ದ ಕೊರತೆಯೇ ಇರುವುದು ಹೊರತು ಕನಸ್ಸುಗಳುಂಟು ನೂರೆಂಟು.

ಒಂದು ಮಗು ಶಾಲೆಗೆ ಹೋಗುವಾಗ “ನಾನು ಬಸ್ಸ್ ಚಾಲಕನಾಗಬೇಕು” ಎಂದು, “ಶಿಕ್ಷಕಿ” ಯಾಗಬೇಕೆಂದು ಇಲ್ಲವೇ “ಪೋಲೀಸ್ ಆಗುವೆ” ಎಂದು ಕನಸ್ಸು ಕಂಡಿರುತ್ತದೆ. ವಯಸ್ಸಿನಲಿ ದೊಡ್ಡವನಾಗುತ್ತಿದ್ದಂತೆ ಕನಸುಗಳು ಗೌರವದ ರೂಪದಲ್ಲೋ ಇಲ್ಲವೇ ಹಣ-ಅಂತಸ್ತಿನ ರೂಪದಲ್ಲಿ ಪರಿವರ್ತನೆಗೊಳ್ಳುತ್ತೆ. ಆದ್ದರಿಂದ ರೈತರ ಸಂಖ್ಯೆ ಕಡಿಮೆಯಾಗುತ್ತಾ ಕೃಷಿವೆಂಬುವ ಮಾನವನಿಗೆ ಆಧಾರವಾದ ಉದ್ಯೋಗವು ಅಂತ್ಯಗೊಳ್ಳುತ್ತರುವುದಲ್ಲದೆ ಬರೀ ಇಂಜಿನೀಯರ್ ಹಾಗು ಡಾಕ್ಟರ್ಗಳ ಸಂಖ್ಯೆ ಹೆಚ್ಚಾಗಲು ಒಂದು ಕಾರಣವಾಗಿದೆ. ಇದರ ಫಲ “ನಿರುದ್ಯೋಗ”. ಹೀಗೆ ಕನಸುಗಳು ಗೌರವ ಹಾಗು ಹಣ-ಅಂತಸ್ತಿನ ಪಾಲಗುತ್ತದೆಯೋ ಆ ಸ್ವಾರ್ಥಭಾವನೆ ಜೀವನದಲ್ಲಿ ಇವೆರಡು ಎಷ್ಟೇ ಲಭಿಸಿದರೂ ಅಸಂಪೂರ್ಣದ ಅರಿವು ಮೂಡಿ ಮನಸಿಗೆ ಜಿಗುಪ್ಸೆಯನ್ನುಂಟು ಮಾಡುತ್ತದೆ. ಅದಲ್ಲದೆ ಎಲ್ಲಾ ಇಂಜಿನೀಯರ್ ಹಾಗು ಡಾಕ್ಟರ್ ಗಳು ಸಾರ್ಥಿಗಳೆಂದು ಹೇಳಲು ಸಾಧ್ಯವಿಲ್ಲ, ಸಾಧಿಸುವ ಮನವುಳ್ಳರೂ ಇರುವರು.

ರಾತ್ರಿ ಬೀಳುವ ಕನಸಿಗೂ ಜೀವನದ ಕನಸಿಗೂ ಏನೋ ಸಂಭಂದ ಇದೆ, ಅದೇನಂದರೆ ಎಲ್ಲಾ ರಾತ್ರಿ ಬೀಳುವ ಕನಸ್ಸು ಮುಂಜಾನೆ ಏಳುವಾಗ ನೆನಪಲ್ಲಿರದು. ಹಾಗೆಯೇ ಜೀವನದಲ್ಲಿ ಕಾಣುತ್ತಿರುವ ಕನಸುಗಳನ್ನು ಒಂದು ಕಡೆಯಿಂದ ಮರೆಯುತ್ತಾ ಬರುತ್ತೇವೆ. “ಕನಸು ಕಾಣಿರಿ” ಎಂದು ಹೇಳಿದ ಅಬ್ದುಲ್ ಕಲಾಂರವರ ಮಾತುಗಳನ್ನು ಅನ್ಯರ್ಥ ಮಾಡಿಕೊಂಡ ನಮ್ಮ ಯುವಕರು “ಕಾಣುವ ಕನಸ್ಸು ನೀವು ಮಲಗಿದರೂ ನಿದಿರೆಯನ್ನು ಮಾಡಬಿಡದೆ ಕಾಡುತ್ತಿರಬೇಕು” ಎಂಬುವ ಉಳಿದ ಮಾತನ್ನು ಅರಿಯದೇ ನಿದ್ದೆ ಮಾಡುತ್ತಾ ಕನಸ್ಸನ್ನು ಕಾಣಲು ಶುರುಮಾಡಿದ್ದರೆ. ಏನೊಂದು ವಿಪರ್ಯ್ಯಸ.

ಯಾವುದೇ ಸಾಧನೆಗೆ ಕನಸ್ಸು ಮುಖ್ಯ, ಇಲ್ಲವಾದಲ್ಲಿ ಈ ಆಧುನಿಕ ಯುಗವು ಈ ಮಟ್ಟಿಗೆ ತಲುಪಿರುವುದಲ್ಲಿ ಅನುಮಾನ ಪಡಬೇಕಾದೀತು. ಎಂತಹ ಕನಸ್ಸುಗಳಿರಲಿ ಪ್ರಯತ್ನವಂಬುದು ನಡೆಯಲೇಬೇಕು. ಗೆಲುವನ್ನು ಕಾಣುವುದು ಕನಸ್ಸಾಗಿರಬೇಕು ಹೊರತು ಸೋಲು ಬಾರದಿರಲಿ ಎಂಬುವ ಕನಸ್ಸ ನೆನೆಯಬೇಡಿ. ಸೋಲೆಂಬುದು ಗುರುವಿದ್ದಂತೆ, ಜೀವನ ಪಾಠ ಕಲಿಸುತ್ತದೆ. ಇದನ್ನರಿಯದ ಹಲವರು ಸೋಲು ಬರದಿರಲಿ ಎನ್ನುತ್ತಾ ಒಮ್ಮೆ ಸೋತೊಡನೆ ಆ ಅಧ್ಬುತ ಕನಸ್ಸನ್ನೇ ಕೈಬಿಡುವರು. ಸೋಲು ಎಷ್ಟೇ ಆಗಲಿ ಗೆಲುವೇ ಪರಮ ಲಕ್ಷ್ಯ ಎಂದರಿತರೆ ಗುರಿ ಮುಟ್ಟುವುದರಲ್ಲಿ ಅನುಮಾನವೇ ಇಲ್ಲವೆಂಬುವ ನನ್ನ ಅಭಿಪ್ರಾಯ.

ಒಡನಾಡಿಗಳೇ,
ಕನಸ್ಸೆಂಬ ಶಿಖರದಲಿ,
ಪ್ರಯತ್ನಗಳ ಸುರಿಮಾಲೆಯಿರಲಿ..
ಕಷ್ಟಗಳೇ ಕಲ್ಲುಮುಳ್ಳುಗಳಿಲ್ಲಿ,
ಸೋಲಿಗೆ ಬಗ್ಗದಿರಲಿ,
ಏನೇ ಆಗಲೀ,
ಈ ಜೀವನ ಗುರಿಯನ್ನು ತಲುಪಲಿ….

ಮಂಗಳವಾರ, ಡಿಸೆಂಬರ್ 27, 2016

Video : Mehebani - Beauty of Nature (ಮೆಹೆರ್ಬಾನಿ - ನಿಸರ್ಗದ ಸೌಂದರ್ಯತೆ)


ಸುಂದರ ನಿಸರ್ಗದ ನಡುವಿನ ನನ್ನ ಪ್ರಯಣದ ಕುರಿತು ಇದೊಂದು ಲಘು ಚಲನಚಿತ್ರ.
ಹಾಡು : ಮೆಹೆರ್ಬಾನಿ (ಸಿನಿಮಾ : ದ ಶಾಕೀನ್ಸ್)

This is a short video about my journey between beautiful nature.

Song : Meherbani (Movie : The Shaukeens)

ಗುರುವಾರ, ಡಿಸೆಂಬರ್ 22, 2016

“ನೋಡಬನ್ನಿ ನಮ್ಮೂರ” - ಕವನ 7




ಮುಂಜಾನೆಯ ಹಕ್ಕಿಗಳ ಚಿಲಿಪಿಲಿ ಕಲರವ
ಇದ ನೋಡಬಯಸಿದ ಆ ಬಾನ ಸೂರ್ಯ…
ಎಲ್ಲೆಲ್ಲೂ ತುಂಬಿರುವುದು ಉದುರುವ ಮಂಜಿನಸರ
ಇದರ ಸೆರೆಯಲಿ ಬಾರದೆ ರವಿಕಿರಣವು ಮಾಯ…

ಕೋಳಿಯ ಕೂಗಿಗೆ ಶುರುವಾಗುವುದು ನನ್ನ ಪ್ರತಿದಿನ
ಎನಮೇಲೆ ಮಲಗಿರುವುದು ಬೆಕ್ಕು, ಮುದುರಿಕೊಂಡು ಬಾಲವನ್ನ…
ಬಾಗಿಲ ತೆಗೆದರೆ ಕಂಡಿತು ಮಂಜಲಿ ಕೂಡಿದ ಸ್ವರ್ಗಬನ
ಆಹಾ! ಎಂತಹ ಜನುಮ ನನ್ನದು, ಮರೆತೆನು ಆಕ್ಷಣ…

ಕರುವು ಆಡುವುದು ಕೊಟ್ಟಿಗೆಯಲಿ ಹಸುವ ಸುತ್ತಿಬಂದು
ಇದನೋಡಿ ನಾಯಿಯು ಬಾಲವಾಡಿಸಿತು ಬೊಗಳಿಕೊಂಡು…
ತಣ್ಣನೆ ಗಾಳಿಚಲನೆಗೆ ಮರಗಿಡಗಳು ನಡುಗಿತು ಚಳಿಗೆಂದು
ದೋಸೆಯ ಮಾಡುತ್ತಿರುವಳು ನನ್ನಮ್ಮ, ಆಕಾಶವಾಣಿಯ ಕೇಳಿಕೊಂಡು…

ಸಿಗದಿನ್ನೊಂದು ಜನ್ಮ, ನೋಡಬನ್ನಿ ನಮ್ಮೂರ
ಮಲೆನಾಡ ಹಸಿರಸಿರಿಯಲಿ ಬೇಸರವೆಂಬುದು ತುಂಬಾದೂರ…
ಕಾಫಿ-ಚಹಾ ಮೆಣಸು, ಮರ ಗಿಡಗಳ ಸರದಾರ
ಕವಿಯ ಮಾಡಿತು ಎನ್ನ, ಇದ ನೆನೆದರೆ ಸಡಗರ…

ಬುಧವಾರ, ಡಿಸೆಂಬರ್ 21, 2016

"ಬ್ರೇಕ್ ಫಾಸ್ಟು" - (ಬತ್ತಿ - ೧)



ಬೆಳಗಿನ ಜಾವ ಗಂಟೆ ಎಂಟಾದಾಗ,
ಕೆಲಸಕೆ ಹೊರಡುವ ತವಕ,
ಆಚೆಗೆ ಈಚೆಗೆ ಹೋಗಿ, ಶರ್ಟು ಪ್ಯಾಂಟು ಧರಿಸಿ,
ಹೊರಟು ನಿಂತಾಗ, ಬಸ್ಸು ಬರಲು ಇದೆ ಕೇವಲ ಹತ್ತು ನಿಮಿಷ ಸಮಯ.

ಹೊಟ್ಟೆ ಚುರುಗುಟ್ಟುತಿದೆ,
ಬೆಳಗಿನ ಹಸಿವು ರೌದ್ರಾವತಾರವನ್ನಾಡುತಿದೆ,
ಬೇಗ ಎದ್ದು ಚಪಾತಿಯೋ, ಅವಲಕ್ಕಿಯೋ ಮಾಡೋಣವೆಂದುಕೊಂಡಿದ್ದೆ,
ಲೇಟಾಗಿ ಎದ್ದಿದರಿಂದ ಏನು ಅಂದುಕೊಂಡಿದ್ದೆ ಎಂದು ಎಣಿಸುವ ಸಮಯವೂ ಇಲ್ಲದಾಗಿದೆ.

ಅದೇನು ಮಹಾ.. ಕಂಪನಿಯಲ್ಲಿ ತಿಂಡಿ ಸಿಗುತ್ತಲ್ಲ ಎಂದ ಒಬ್ಬ ಭೂಪ,
ಹೌದಪ್ಪ.. ಆದರೆ ನನ್ನ ಕಷ್ಟ ನಾನೆ ಬಲ್ಲೆ ಪಾಪ.
ಸಿಂಪಲ್ಲಾಗೆ ಹೇಳುವುದಾದರೆ ಕಂಪನಿಯಲ್ಲಿ ಸಿಗುವ ತಿಂಡಿ ನನ್ನ ಬಾಯಿಗೆ ಹಿಡಿಸಲ್ಲ,
ದೋಸೆ, ನೀರ್ ದೋಸೆ ತಿಂದು ತೇಗಿದ ಹೊಟ್ಟೆ ಸಮೋಸ, ಬಜಿಯ ಸಹಿಸಲ್ಲ.

ಗೌತಮ ಹೇಳಿದ್ದ ಆಸೆಯೇ ದುಃಖಕ್ಕೆ ಮೂಲ,
ನನಗಂತು ಸದ್ಯಕ್ಕೆ ನನ್ನ ಹಸಿವಿನ ಆಳವೇ ಅದನೆಲ್ಲವಮೀರಿದ ಮೂಲ.
ಖಾಲಿ ಹೊಟ್ಟೆಯಲಿ ಮಧ್ಯಾಹ್ನದವರೆಗೂ ಸಮಯ ಕಳೆಯಬೇಕಾದ ಸ್ಥಿತಿ,
ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವುದೇ ನನಗೆ ಉಳಿದಿರುವ ಗತಿ.

ದಿನ ಸಮಯ ಕಳೆದಿದ್ದರೂ ಬಸ್ಸು ಬಂದಿರಲಿಲ್ಲ ,
ಹಾಗಂತ ಹೇಳಿ ನಾವು ಸುಮ್ಮನೆ ನಿಂತುಕೊಳ್ಳುವವರಲ್ಲ ,
ಸುತ್ತ ಮುತ್ತ ಹಾರಾಡುವ ಹಕ್ಕಿಗಳ ಸೊಭಗನು ಸವಿಯುವ ಅವಕಾಶವನ್ನು ಕಳೆದುಕೊಳ್ಳುವವರಲ್ಲ,
ದಿನದಿಂದ ನನ್ನ ಬೆಳಗಿನ ಹೊಟ್ಟೆ ಹಸಿವಿನ ವಿಧಿಯು ಬದಲಾಗುವುದೆಂದು ನನಗೂ ತಿಳಿದಿರಲಿಲ್ಲ.


ಒಂದು ದಿನ ಬಂದಿದ್ದ ಒಬ್ಬ ಅಣ್ಣ
ಸುಮಾರಾಗಿತ್ತು ಅವನ ಬಣ್ಣ,
ಅವನ ಬಳಿ ಇತ್ತು  ಒಂದು ಮಹಾ ಪಾತ್ರೆ,
ಪಾತ್ರೆಯ ಬಾಯಿ ತೆರೆದಾಗ ಅಲ್ಲೇ ಆಗಿತ್ತು ನಮ್ಮ ಕಣ್ಮನಸಿಗೆ  ಒಂದು ಲಘು ಜಾತ್ರೆ.

ಪಾತ್ರೆಯಲ್ಲಿತ್ತು ಇಡ್ಲಿ ... ವಡಾ ...
ಅದನ್ನು ನೋಡಿದ್ದೆ ತಡ,
ಬಂದಿತ್ತು ನಮ್ಮ ಬಾಯಲ್ಲಿ ನೀರು ಒಂದು ಕೊಡ.

ಮೊದಲು ನನ್ನ ಗೆಳೆಯ ಮುನ್ನೆಜ್ಜೆಯಿಟ್ಟ ತಣಿಸಲು ಆತನ ಹೊಟ್ಟೆಯ ಬರ,
ತಿಂಡಿಯ ಬಗೆ ವಿಚಾರಿಸಿ ಕೇಳಿದಹೇಗಿದೆಯಣ್ಣ ಇದರ ದರ?
ಆತ "ಹತ್ತು (೧೦) ರುಪಾಯಿಗೆ ಮೂರು () ಇಡ್ಲಿ ಅಥವಾ ಎರಡು () ವಡ", ಎಂದ ಬಳಸಿ ಅವನ ಗಡುಸಾದ ಸ್ವರ,
ಇದನ್ನು ಕೇಳಿದ ನಮಗಂತು ಲಭಿಸಿತ್ತು  ಸ್ವರ್ಗ, ಬರೇ ಮೂರೇ ಮೂರು ಇಂಚು ದೂರ.

ಅಂದಿನಿಂದ ಖಾಯಂ ಆಗಿತ್ತು ನಮ್ಮ ಬೆಳಗ್ಗಿನ  ಬ್ರೇಕ್ ಫಾಸ್ಟು
ಇಡ್ಲಿ ಜೊತೆ ತೆಂಗಿನ ಚಟ್ನಿ.. ಆಹಾ .. ಟೆಸ್ಟೋ ಟೆಸ್ಟು.
ನಾವು ಬಯಸಿದ ತಿಂಡಿ ನಮ್ಮನ್ನು ಹುಡುಕಿ ಬಂದಿತ್ತು,
ಬೆಳಗಿನ ಖಾಲಿ ಹೊಟ್ಟೆಯ ಕೊರಗು ಈಗ ಮರೆಯಾಗಿತ್ತು.

ಇಷ್ಟು ದಿನ ಮನಸಿಲ್ಲದ ಮನಸಲಿ ಎದ್ದು ಲೇಟಾದರೆ ಬಸ್ಸು ತಪ್ಪುತ್ತಿತ್ತು
ಆದರೆ ಈಗ ಲೇಟಾದರೆ ಬಸ್ಸಿನ ಮೊದಲು ಇಡ್ಲಿ ತಿನ್ನುವ ಅವಕಾಶ ತಪ್ಪುತ್ತಿತ್ತು,
ಮೊದಲು ಕೆಲಸಕೆ ಹೋಗುವ ಅನಿವಾರ್ಯತೆ ನಮ್ಮನ್ನು ಎಳೆಯುತ್ತಿತ್ತು,
ಆದರೆ ಈಗ ಇಡ್ಲಿ ತಿನ್ನುವ ಹಂಬಲ ನಮ್ಮನ್ನು ಸಳೆಯುತಿತ್ತು.

 ಈಗಂತು ನಡುನಡುವೆ ಇಡ್ಲಿ ಅಣ್ಣ ಬರದೇ ಹೋದರೆ ಆಕಾಶವೇ ಕಳಚಿ ಬಂದಂತಾಗುತ್ತದೆ,
ನಮ್ಮಲ್ಲಿ ಕೆಲವರಿಗಂತು ಕಂಪನಿ ಕೆಲಸಗಿಂತ ಬೆಳಗಿನ ಇಡ್ಲಿಯೇ ಮುಖ್ಯವಾಗಿದೆ.
ಅಷ್ಟಕ್ಕೂ ನೀವೇ ಹೇಳಿ ಇಡೀ ದಿನ ಲವಲವಿಕೆಯಿಂದಿರಲು ಯಾವುದು ಬೇಕು ಫಸ್ಟು ?
ಅಲ್ವೇ ಅದು ರುಚಿಯಾದ ಆರೋಗ್ಯಕರ ಹೊಟ್ಟೆ ತುಂಬಿಸುವ ಬ್ರೇಕ್ ಫಾಸ್ಟು ?


-ಲ್ಯಾಂಡಲ್.


ಭಾನುವಾರ, ನವೆಂಬರ್ 20, 2016

"ನಾ ಬರುವ ಆ ಸಂಜೆ…" - ಕವನ 6



ನಾ ಬರುವ ಆ ಸಂಜೆ…
ಬಾನಲಿ ರವಿಯು ಕೆಂಪಾಗಿರುವುದ ನಾಕಂಡೆ.
ಆ ಸೊಗಸ ನೋಡಬಂತು ಹಕ್ಕಿಗಳ ಹಿಂಡೆ.
ರಸಿಕನಾದೆನು ನಾನಿನಗೆ ಆ ದಿನದಂದೆ….

ನಾ ಬರುವ ಆ ಸಂಜೆ…
ಮಕ್ಕಳೆಲ್ಲ ಆಡುತ್ತಿರುವರು ಎಲ್ಲವ ಮರೆತಂತೆ.
ಬದಿಯಲ್ಲಿರುವ ಶ್ವಾನವು ಕುಳಿತಿರುವುದು ಅವರ ನೋಡಿ ನಗುವಂತೆ.
ಖುಷಿಯೆಂಬುದು ಒಂದೇ ಈ ನಿನ್ನ ಸೃಷ್ಟಿಯ ಮುಂದೆ….

ನಾ ಬರುವ ಆ ಸಂಜೆ…
ಕರುವೊಂದು ಓಡಿಬಂತು ಹಸಿವಾದಂತೆ.
ಕೊರಳಗಂಟೆಯ ಸದ್ದಿಗೆ ಹಸುವು ಕರೆಯಿತದವ “ಅಂಬೇ”.
ಎಲ್ಲವೂ ನಿನ್ನ ಒಲವಯ್ಯ, ಮರಳಾದೆನು ನಿನಗೆಂದೆ….

ನಾ ಬರುವ ಆ ಸಂಜೆ….
ನಾನೆನೆಯುವೆ ಎಲ್ಲವ ಪಡೆದಂತೆ.
ಪಕೃತಿಯೇ ಈ ನಿನ್ನ ಮಾಯೆಯ ನೋಡಿ ನಾಸೋತೆ.
ನಿನ್ನ ನೋಡಿದ ಈ ಜನುಮ ಸಾರ್ಥಕವಾದಂತೆ…

ಶುಕ್ರವಾರ, ಅಕ್ಟೋಬರ್ 21, 2016

" ಕನಸಲಿ ಕಳೆದಿರುವೆ.." - ಕವನ 5




ನಿದಿರೆಯೇ ಬಾರದ ಈ ಕಣ್ಣಲಿ
ಕನಸೊಂದ ನಾ ಕಂಡಿರುವೆ…

ಕನಸ ಕಂಡ ಮರುಕ್ಷಣವೇ
ಅದರೊಳಗೆ ನಾ ಕಳೆದಿರುವೆ…

ಕನಸೇ ನೀ ಛಲವ ಬಿಡದೆ
ನಾ ಎಲ್ಲವ ತೊರೆದಿರುವೆ…

ಕನಸ ಲೋಕವ ನನಸ ಮಾಡಲು
ನಾ ನನ್ನೆ ಕಾಡಿರುವೆ…

ಬದುಕೆಂಬ ಈ ಪಯಣದ ಬೆರಗಿಗೆ
ನಾ ಎಲ್ಲವ ಮರೆತಿವೆ..